ಲಕ್ಷ್ಮೇಶ್ವರ(ಗದಗ ಜಿಲ್ಲೆ): ಕೋವಿಡ್ ಲಾಕ್ಡೌನ್ನಿಂದ ಸಂಕಷ್ಟಕ್ಕೆ ಸಿಲುಕಿರುವ ಬಡ ಜನರಿಗೆ ಸಹಾಯ ಮಾಡಲು ಯುವ ರೈತರೊಬ್ಬರು ಎರಡು ಎಕರೆ ಜಮೀನು ಅಡವಿಟ್ಟು, ಆ ಹಣದಲ್ಲಿ ಗ್ರಾಮದ ಬಡವರಿಗೆ ಆಹಾರ ಧಾನ್ಯಗಳ ಕಿಟ್ ವಿತರಿಸಿದ್ದಾರೆ.
ತಾಲ್ಲೂಕಿನ ಕುಂದ್ರಳ್ಳಿ ಗ್ರಾಮದ ರಮೇಶ ಮುಂದಿನಮನಿ ಜನರ ಕಷ್ಟಕ್ಕೆ ಮಿಡಿದ ರೈತ.
ರಮೇಶ ಅವರಿಗೆ ಎರಡು ಎಕರೆ ಹೊಲ ಇದ್ದು, ಅದನ್ನು ₹80 ಸಾವಿರಕ್ಕೆ ಅಡ ಇಟ್ಟಿದ್ದಾರೆ. ಬಂದ ಹಣದಲ್ಲಿ ₹40 ಸಾವಿರವನ್ನು ಗ್ರಾಮದಲ್ಲಿನ ನಿರ್ಗತಿಕರು, ವಿಧವೆಯರು, ಅಂಗವಿಕಲರು, ವೃದ್ಧರಿಗೆ ದಿನಸಿ ಕಿಟ್ ಹಂಚಲು ಬಳಸಿದ್ದಾರೆ. ಭಾನುವಾರ 200 ಜನರಿಗೆ ದಿನಸಿ ಕಿಟ್ ವಿತರಿಸಿದ್ದಾರೆ.
‘ಲಾಕ್ಡೌನ್ನಲ್ಲಿ ಕೆಲಸ ಇಲ್ಲದೆ ನಮ್ಮೂರಿನ ಬಡವರು ಬಳಲುತ್ತಿದ್ದರು. ಹಸಿವಿನ ಕಷ್ಟ ನನಗೆ ಗೊತ್ತಿದೆ. ದುಡಿಮೆಯಿಲ್ಲದ ಅಸಹಾಯಕತನ ನಾನೂ ಅನುಭವಿಸಿರುವೆ. ನನ್ನಂತೆ ಇರುವವರ ಕಷ್ಟಕ್ಕೆ ಕೈಲಾದಷ್ಟು ಸಹಾಯ ಮಾಡಿದರಾಯಿತು ಎಂದು ಕಿಟ್ ಹಂಚಿದ್ದೇನೆ. ಡಾ.ಬಿ.ಆರ್.ಅಂಬೇಡ್ಕರ್ ಅವರ ವಿಚಾರಧಾರೆಗಳೇ ನನಗೆ ಸ್ಫೂರ್ತಿ’ ಎಂದು ರಮೇಶ ಹೇಳುತ್ತಾರೆ.
‘ರಮೇಶ ತಾನೇ ಬಡವನಿದ್ದರೂ ಉಳಿದವರಿಗೆ ಸಹಾಯ ಮಾಡಲು ಮುಂದಾಗಿದ್ದಾನೆ. ಅವನ ಕೆಲಸ ಉಳಿದವರಿಗೆ ಮೇಲ್ಪಂಕ್ತಿಯಾಗಿದೆ’ ಎಂದು ಗ್ರಾಮದ ನಿವಾಸಿ ನಾಗರಾಜ ಪಾಟೀಲ ಮೆಚ್ಚುಗೆ ವ್ಯಕ್ತಪಡಿಸಿದರು.