ಗದಗ: ಮುಂಡರಗಿ ತಾಲ್ಲೂಕಿನ ಕೊರ್ಲಹಳ್ಳಿ ಗ್ರಾಮದ ಸಮೀಪ ತುಂಗಭದ್ರಾ ನದಿಯಲ್ಲಿ ದೊಡ್ಡ ಮೊಸಳೆ ಪ್ರತ್ಯಕ್ಷವಾಗಿದ್ದು, ಗ್ರಾಮಸ್ಥರಲ್ಲಿ ತೀವ್ರ ಆತಂಕ ಮೂಡಿಸಿದೆ.
ಇಲ್ಲಿ ತುಂಗಭದ್ರಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ ಕೆಳಭಾಗದಲ್ಲಿ ಒಂದು ವಾರದಿಂದ ಮೊಸಳೆ ಇರುವುದರನ್ನು ಸ್ಥಳೀಯರು ಗಮನಿಸಿದ್ದಾರೆ. ಕೆಲವರು ಮೊಸಳೆ ಈಜುತ್ತಿರುವ ವಿಡಿಯೊ ಸರೆಹಿಡಿದು ಸಾಮಾಜಿಕ ಜಾಲ ತಾಣಗಳಲ್ಲಿ ಹರಿಬಿಟ್ಟಿದ್ದಾರೆ.
ಈ ಸೇತುವೆಯ ಇನ್ನೊಂದು ತುದಿಯಲ್ಲಿ (ಬಳ್ಳಾರಿ ಜಿಲ್ಲೆ, ಹೂವಿನಹಡಗಲಿ ತಾಲ್ಲೂಕು) ಮದಲಗಟ್ಟಿ ಆಂಜನೇಯನ ದೇವಸ್ಥಾನವಿದ್ದು, ಇಲ್ಲಿಗೆ ನಿತ್ಯ ನೂರಾರು ಪ್ರವಾಸಿಗರು ಬರುತ್ತಾರೆ. ನದಿಯಲ್ಲಿ ಮೊಸಳೆ ಕಂಡು ಬಂದಿದ್ದರಿಂದ ಯಾತ್ರಾರ್ಥಿಗಳಲ್ಲಿ ಆತಂಕ ಮನೆ ಮಾಡಿದ್ದು, ನದಿಗೆ ಇಳಿಯಲು ಹಿಂದೇಟು ಹಾಕುತ್ತಿದ್ದಾರೆ.
ಈ ಸೇತುವೆ ಸದಾ ಜನದಟ್ಟಣೆಯಿಂದ ಕೂಡಿರುವ ಸ್ಥಳವಾಗಿದ್ದು, ಪ್ರವಾಸಿಗರು ಊಟ, ಉಪಹಾರ, ವಿಶ್ರಾಂತಿಗಾಗಿ ನದಿ ದಂಡೆಯನ್ನು ಆಶ್ರಯಿಸುತ್ತಿದ್ದಾರೆ.
ಮೊಸಳೆ ಕಂಡು ಬಂದ ಹಿನ್ನೆಲೆಯಲ್ಲಿ ಕೊರ್ಲಹಳ್ಳಿ ಗ್ರಾಮಸ್ಥರು ನದಿಗೆ ಇಳಿಯಲು ಹೆದರುತ್ತಿದ್ದಾರೆ. ಮೊಸಳೆಯನ್ನು ಸೆರೆ ಹಿಡಿದು ಬೇರೆಡೆಗೆ ಸ್ಥಳಾಂತರಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.