ಡಂಬಳ: ಸಾರ್ವಜನಿಕರ ಆರೋಗ್ಯದ ಹಿತದೃಷ್ಠಿಯಿಂದ ಸರ್ಕಾರದ ನಿಯಮಾನುಸಾರ ಕೊರೊನಾ ಹಾವಳಿಯಿಂದ ಕಳೆದ ಎರಡು ವರ್ಷ ಡಂಬಳದ ತೋಂಟದಾರ್ಯ ಮಠದ ಜಾತ್ರೆಯನ್ನು ಸರಳವಾಗಿ ಆಚರಿಸಲಾಗಿತ್ತು. ಈ ಬಾರಿ ಖಡಕ್ ರೊಟ್ಟಿ ಜಾತ್ರೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಡಗರ ಸಂಭ್ರದಿಂದ ನಡೆಯಲಿದೆ ಎಂದು ಜಾತ್ರಾ ಕಮಿಟಿ ಅಧ್ಯಕ್ಷ ಮುತ್ತಣ್ಣ ಕೊಂತಿಕಲ್ ಹೇಳಿದರು.
ನಗರದ ತೋಂಟದಾರ್ಯ ಕಲಾಭವನದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 1976ರಿಂದ ಪ್ರಾರಂಭವಾದ ರೊಟ್ಟಿ ಜಾತ್ರೆಯು ರಾಜ್ಯದಲ್ಲಿ ಪ್ರಸಿದ್ಧಿ ಪಡೆದಿದೆ. ಈ ಬಾರಿ ಜಾತ್ರೆ ಅಂಗವಾಗಿ ಫೆ.2ರಂದು ಸಂಜೆ 7.30ಕ್ಕೆ ಬಸವ ಧ್ವಜೊರೋಹಣ ಮತ್ತು ಕಳಸಾರೋಹಣ ನಡೆಯಲಿದೆ. ಫೆ 3ರಂದು ತೋಂಟದಾರ್ಯ ಕಲಾಭವನದಲ್ಲಿ ಬೆಳಗ್ಗೆ 10ಕ್ಕೆ ಜಾತ್ರಾ ಕಮಿಟಿ ಹಾಗೂ ರಕ್ತ ನಿಧಿ ಕೇಂದ್ರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಗದಗ ಸಹಯೋಗದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ನಡೆಯಲಿದೆ ಎಂದು ತಿಳಿಸಿದರು.
ಫೆ 6ರಂದು ಬೆಳಿಗ್ಗೆ 10ಕ್ಕೆ ಮಠದ ಆವರಣದಲ್ಲಿ ನಿರ್ಮಾಣಗೊಂಡ ಡಾ.ತೋಂಟದ ಸಿದ್ದಲಿಂಗ ಶ್ರೀಗಳ ದಾಸೋಹ ಭವನದ ಕಟ್ಟಡವನ್ನು ಆನಂದಪುರದ ಬೆಕ್ಕಿನ ಕಲ್ಮಠದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಉದ್ಘಾಟಿಸಲಿದ್ದಾರೆ. ಸಂಜೆ 6.30ಕ್ಕೆ ತೋಂಟದ ಮದರ್ಧನಾರೀಶ್ವರ ಶಿವಯೋಗಿಗಳ 283ನೇ ವರ್ಷದ ಜಾತ್ರೆಯ ತೇರು ಸಾಗುವುದು ಎಂದು ಹೇಳಿದರು.
ಮಠದ ವ್ಯವಸ್ಥಾಪಕ ಜಿ.ವಿ.ಹಿರೇಮಠ ಮಾತನಾಡಿ, ಫೆ 8ರಂದು ಸಂಜೆ 6.30ಕ್ಕೆ ಲಘು ರಥೋತ್ಸವ ನಡೆಯಲಿದೆ. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘ ಹಾಗೂ ವಿವಿಧ ಸ್ವಸಹಾಯ ಸಂಘದ ಸದಸ್ಯರು ಹಾಗೂ ಡಂಬಳ ಸೇರಿದಂತೆ ವಿವಿಧ ಗ್ರಾಮಗಳ ಭಕ್ತರು ಮಠಕ್ಕೆ ಅಂದಾಜು 60 ಸಾವಿರಕ್ಕೂ ಹೆಚ್ಚು ಖಡಕ್ ರೊಟ್ಟಿ ನೀಡಲಿದ್ದಾರೆ ಎಂದರು.