ಮುಳಗುಂದ: ಶನಿವಾರ ಪಟ್ಟಣಕ್ಕೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ಎಂ.ಸುಂದರೇಶ ಬಾಬು ಅವರು ಮಳೆಯಿಂದ ಭರ್ತಿಯಾಗಿರುವ ಅಬ್ಬಿ ಕೆರೆ ವೀಕ್ಷಿಸಿದರು.
ಈ ವೇಳೆ ಸ್ಥಳಿಯ ಮುಖಂಡರೊಂದಿಗೆ ಚರ್ಚಿಸಿದ ಅವರು, ಜನಪ್ರತಿನಿಧಿಗಳು, ಸಾರ್ವಜನಿಕರು ಸೇರಿ ಕೆರೆ ಅಭಿವೃದ್ದಿ ಸಮಿತಿ ರಚಿಸಿಕೊಂಡು ಕೆರೆಗಳ ಅಭಿವೃದ್ದಿಗೆ ಮುಂದಾಗಬೇಕು. ಕೆರೆಗಳ ಸಂರಕ್ಷಣೆಯಿಂದ ಅಂತರ್ಜಲ ವೃದ್ಧಿಯಾಗಿ, ಬೇಸಿಗೆಯಲ್ಲಿ ರೈತರಿಗೂ ನೀರಿನ ಬವಣೆ ನೀಗಲಿದೆ. ಇತ್ತಿಚೆಗೆ ಒತ್ತುವರಿ ತೆರವು ಮಾಡಿದ್ದ ಕೆರೆಗಳು ಈಗಾಗಲೇ ಸತತ ಮಳೆಯಿಂದ ಭರ್ತಿಯಾದ ಕೆರೆಗಳ ದಡದಲ್ಲಿ ಅರಣ್ಯ ಇಲಾಖೆಯ ಸಹಯೋಗದಲ್ಲಿ ಸಸಿ ನೆಟ್ಟು ಹಸಿರುಕರಣ ಮಾಡಬೇಕು ಎಂದು ಸಲಹೆ ನೀಡಿದರು.
ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಸ್ಥಳೀಯ ಪಟ್ಟಣ ಪಂಚಾಯ್ತಿಯ ಒಟ್ಟು 8 ಕೆರೆಗಳ ಪೈಕಿ 6 ಕೆರೆಗಳ ಒತ್ತುವರಿ ತೆರವು ಮಾಡಿದ್ದು, ಇನ್ನುಳಿದ 2 ಕೆರೆಗಳ ಒತ್ತುವರಿ ತೆರವಿಗೆ ಕ್ರಮಕೈಗೊಳ್ಳಲು ಸೂಚನೆ ನೀಡಲಾಗಿದೆ. ಕೃಷಿ ಮತ್ತು ಕಂದಾಯ ಇಲಾಖೆಗಳು ಜಂಟಿಯಾಗಿ ಅತಿವೃಷ್ಟಿಯಿಂದ ಹಾನಿಗೀಡಾದ ಪ್ರದೇಶಗಳಲ್ಲಿನ ಬೆಳೆಗಳ ಸಮೀಕ್ಷೆ ನಡೆಸಿದ್ದು ಅವರು ವರದಿ ಸಲ್ಲಿಸಿದ ನಂತರ ಅದನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದರು.
ಮಳೆಯಿಂದ ಹಾನಿಗೀಡಾದ ಮನೆಗಳ ಸಮೀಕ್ಷೆ ನಡೆಸಿ ಎನ್ಡಿಆರ್ಎಫ್ ಮಾರ್ಗಸೂಚಿ ಪ್ರಕಾರ ಪರಿಹಾರ ವಿತರಿಸುತ್ತೇವೆ. ತಾಲ್ಲೂಕಿನಲಲ್ಲಿ ಮಳೆಯಿಂದ ರಸ್ತೆಗಳು ಸಾಕಷ್ಟು ಪ್ರಮಾಣದಲ್ಲಿ ಹಾಳಾಗಿದ್ದು ಲೋಕೋಪಯೋಗಿ ಇಲಾಖೆಗೆ ರಿಪೇರಿ ಕಾಮಗಾರಿಗೆ ಸೂಚಿಸಲಾಗಿದೆ. ಮಳೆ ಕಡಿಮೆಯಾದ ನಂತರ ಕಾಮಗಾರಿ ಕೈಗೊಳ್ಳಲಿದೆ ಎಂದು ತಿಳಿಸಿದರು.
ಜಿಲ್ಲಾ ಯೋಜನಾ ನಿರ್ದೇಶಕ ರುದ್ರೇಶ, ಎಪಿಎಂಸಿ ಅಧ್ಯಕ್ಷ ಸಿ.ಬಿ.ಬಡ್ನಿ, ಮುಖಂಡರಾದ ಬಸವರಾಜ ಸಂಕಾಪೂರ, ಪಟ್ಟಣ ಪಂಚಾಯ್ತಿ ಸದಸ್ಯರಾದ ವಿಜಯ ನೀಲಗುಂದ, ಎನ್.ಆರ್.ದೇಶಪಾಂಡೆ, ಕೆ.ಎಲ್.ಕರಿಗೌಡ್ರ, ಮಹಾಂತೇಶ ನೀಲಗುಂದ, ಎಸ್.ಸಿ.ಬಡ್ನಿ, ಬಸವರಾಜ ಹಾರೋಗೇರಿ, ಮುಖ್ಯಾಧಿಕಾರಿ.ಬೆಂತೂರ ಇದ್ದರು.