ಚಳ್ಳಕೆರೆ: ತಹಶೀಲ್ದಾರ್ಗೆ ದೂರವಾಣಿ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪದ ಮೇಲೆ ಇಲ್ಲಿನ ನಗರಸಭಾ ಸದಸ್ಯರೊಬ್ಬರನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಎಂ.ಶಿವಮೂರ್ತಿ ಬಂಧಿತರು. ಅವರನ್ನು 26ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಶುಕ್ರವಾರ ಸಂಜೆ ತಹಶಿಲ್ದಾರ್ ಟಿ.ಸಿ.ಕಾಂತರಾಜ್ ಅವರನ್ನು ಕಚೇರಿಯಲ್ಲಿ ಭೇಟಿ ಮಾಡಿದ ಶಿವಮೂರ್ತಿ, ಯಾವುದೋ ವಿಷಯಕ್ಕೆ ವಾದ ನಡೆಸಿದ್ದಾರೆ. ಇದರಿಂದ ಸಿಟ್ಟಾದ ಶಿವಮೂರ್ತಿ, ದೂರವಾಣಿ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎನ್ನಲಾಗಿದೆ.
ಪಿತೂರಿ ಆರೋಪ:
ಸೋಮವಾರ ಕೋರ್ಟ್ ಆವರಣದಲ್ಲಿ ಮಾತನಾಡಿದ ಶಿವಮೂರ್ತಿ, ’ನನ್ನ ಬಂಧನ ದುರುದ್ದೇಶದಿಂದ ಕೂಡಿದೆ. ನಾಲ್ಕು ಬಾರಿ ಪುರಸಭೆ ಸದಸ್ಯನಾಗಿ ಆಯ್ಕೆಯಾಗಿರುವ ನನ್ನ ಏಳಿಗೆಯನ್ನು ಸಹಿಸದ ಕೆಲವರು ಪಿತೂರಿ ನಡೆಸುತ್ತಿದ್ದಾರೆ. ಈ ಬಗ್ಗೆ ಕಾನೂನು ಹೋರಾಟ ನಡೆಸುತ್ತೇನೆ’ ಎಂದು ತಿಳಿಸಿದ್ದಾರೆ.