ಮುಂಡರಗಿ: ಕಲ್ಲುಗಣಿಗಾರಿಕೆಯಲ್ಲಿ ಬಳಸುವ ಸ್ಫೋಟಕದ ತಯಾರಿಕೆಗೆ ಬೇಕಾಗುವ ಕಚ್ಚಾವಸ್ತುಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಲಾರಿಯೊಂದನ್ನು ಮಂಗಳವಾರ ರಾತ್ರಿ ತಾಲ್ಲೂಕಿನ ಬೀಡನಾಳ ಗ್ರಾಮದ ಬಳಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ತಲಾ 50 ಕೆ.ಜಿ ತೂಕದ 135 ಚೀಲಗಳಲ್ಲಿದ್ದ ಒಟ್ಟು 6,750 ಕೆ.ಜಿ, ಅಮೋನಿಯಂ ನೈಟ್ರೇಟ್ ರಾಸಾಯನಿಕವನ್ನು ವಶಕ್ಕೆ ಪಡೆಯಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಲಾರಿ ಚಾಲಕ ಅಶೋಕ ಕೊಂಪಿಕಲ್ ಎಂಬುವವರನ್ನು ಬಂಧಿಸಲಾಗಿದೆ.
ಸ್ಫೋಟಕ ಸಾಮಗ್ರಿ ತಯಾರಿಸುವಂತಹ ಕಚ್ಚಾ ವಸ್ತುವನ್ನು ಮಂಡ್ಯ ಜಿಲ್ಲೆಯ ಬಿಡದಿ ಹಾಗೂ ಆಂಧ್ರಪ್ರದೇಶ ಹಿಂದೂಪುರಕ್ಕೆ ಸಾಗಾಟ ಮಾಡಲಾಗುತ್ತಿತ್ತು ಎನ್ನಲಾಗಿದೆ. ಸಿಪಿಐ ಸುಧೀರಕುಮಾರ ಬೆಂಕಿ ನೇತೃತ್ವದ ಪೊಲೀಸ್ ತಂಡವು ಈ ಕಾರ್ಯಾಚರಣೆ ನಡೆಸಿತ್ತು.
ಸ್ಫೋಟಕ ಸಾಮಗ್ರಿ ತಯಾರಿಸುವ ಕಚ್ಚಾ ವಸ್ತುವನ್ನು ಸಂಗ್ರಹಿಸಿಟ್ಟ ಗೋದಾಮಿನ ಮಾಲೀಕ ಬಸವರಾಜ ಅಂಗಡಿ ಹಾಗೂ ಲಾರಿ ಚಾಲಕನ ಮೇಲೆ ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.