ಲಕ್ಷ್ಮೇಶ್ವರ: ಇಡೀ ರಾತ್ರಿ ವಿದ್ಯುತ್ ಪೂರೈಸಬೇಕು ಎಂದು ಆಗ್ರಹಿಸಿ ಶುಕ್ರವಾರ ಭಾರತೀಯ ಕಿಸಾನ್ ಸಂಘ ಸದಸ್ಯರು ಇಲ್ಲಿನ ಹೆಸ್ಕಾಂ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಸಂಘದ ಉತ್ತರ ಕರ್ನಾಟಕ ಪ್ರಾಂತದ ಉಪಾಧ್ಯಕ್ಷ ವೀರಣ್ಣ ಮಜ್ಜಗಿ ಮಾತನಾಡಿ, ಸದ್ಯ ರೈತರ ಪಂಪ್ಸೆಟ್ಗಳಿಗೆ ರಾತ್ರಿ 10ರವರೆಗೆ ಮಾತ್ರ ವಿದ್ಯುತ್ ಪೂರೈಕೆ ಆಗುತ್ತಿದೆ. ನಂತರ ವಿದ್ಯುತ್ ಪೂರೈಕೆ ಇರುವುದಿಲ್ಲ. ಬೆಳಕು ಇಲ್ಲದ ಕಾರಣ ರಾತ್ರಿ ಕಳ್ಳರು ತೋಟ ಮತ್ತು ಹೊಲದಲ್ಲಿನ ಕೃಷಿ ಉಪಕರಣಗಳು ಮತ್ತು ವಿದ್ಯುತ್ ಮೋಟಾರ್, ತಂತಿಗಳನ್ನು ಕಳವು ಮಾಡುತ್ತಿದ್ದಾರೆ. ಕತ್ತಲು ಇರುವುದರಿಂದ ಕಳ್ಳರಿಗೆ ಅನುಕೂಲ ಆಗುತ್ತದೆ. ಕಾರಣ ಇಡೀ ರಾತ್ರಿ ವಿದ್ಯುತ್ ಪೂರೈಸಬೇಕು ಎಂದು ಅವರು ಮನವಿ ಮಾಡಿದರು.
ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಡಾಕಪ್ಪ ಸಾತಪುತೆ, ಪುಲಕೇಶಿ ಬಟ್ಟೂರ, ಜಗದೀಶ ಲಿಂಗಶೆಟ್ಟಿ, ಮುತ್ತಣ್ಣ ಚಂದರಗಿ, ಮಹಾದೇವಪ್ಪ ಗಿಡಿಬಿಡಿ, ಚೆನ್ನಪ್ಪ ಹಾದಿಮನಿ, ಬಸವರಾಜ ಗಿಡಿಬಿಡಿ ಇದ್ದರು.