ನಗರದ ರಸ್ತೆಯಲ್ಲಿ ಸಾಗಿದರೆ ದೂಳಿನ ಮಜ್ಜನವಾಗುತ್ತಿದ್ದು, ವಾಹನ ಸವಾರರು ಕಣ್ಣಿಗೆ ಕನ್ನಡಕ, ಹೆಲ್ಮೆಟ್ ಹಾಕಿಕೊಂಡು ಓಡಾಡಬೇಕಾದ ಪರಿಸ್ಥಿತಿ ಇದೆ. ಹಳೆಯ ಮತ್ತು ಹೊಸ ಬಸ್ ನಿಲ್ದಾಣ, ಜನತಾ ಬಜಾರ್, ಹುಯಿಲಗೋಳ ನಾರಾಯಣರಾವ್ ವೃತ್ತ, ರೋಟರಿ ವೃತ್ತ, ಗಾಂಧಿ ವೃತ್ತ, ಭೂಮರಡ್ಡಿ ವೃತ್ತ, ಹಳೆ ಡಿ.ಸಿ. ಕಚೇರಿ, ಮುಳಗುಂದ ನಾಕಾ ಸೇರಿ ನಗರದಲ್ಲಿ ಎಲ್ಲೇ ಸುತ್ತಾಡಿದರೂ ಮುಖಕ್ಕೆ ದೂಳು ಅಡರುತ್ತದೆ. ಆಟೊ ಸವಾರರು, ಸೈಕಲ್ ಮೇಲೆ ಶಾಲೆಗಳಿಗೆ ಹೋಗುವ ಪುಟ್ಟ ಮಕ್ಕಳು, ರಸ್ತೆಯ ಬದಿಯ ವ್ಯಾಪಾರಿಗಳಿಗೂ ದೂಳು ಸಾಕಾಗಿದೆ.