ಗದಗ: ಇಲ್ಲಿನ ಜಿಲ್ಲಾ ವೈದ್ಯಕೀಯ ವಿಜ್ಞಾನ ಸಂಸ್ಥೆ ಹಾಗೂ ಜಿಲ್ಲಾ ಆಸ್ಪತ್ರೆಯಲ್ಲಿನ ಔಷಧ ಉಗ್ರಾಣಕ್ಕೆ ಮಳೆ ನೀರು ನುಗ್ಗಿದ್ದು, ಕೋಟ್ಯಂತರ ಮೌಲ್ಯದ ಔಷಧಗಳು ನೀರಿನಲ್ಲಿ ತೇಲುತ್ತಿವೆ, ಅವುಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಸಿಬ್ಬಂದಿ ಗುರುವಾರ ಹರಸಾಹಸಪಟ್ಟರು.
‘ನಿರಂತರ ಮಳೆಯ ನೀರು ಔಷಧ ಉಗ್ರಾಣಕ್ಕೆ ನುಗ್ಗಿದೆ. ಇಲ್ಲಿ ಅಂದಾಜು ₹3 ರಿಂದ ₹4 ಕೋಟಿ ಮೌಲ್ಯದ ಔಷಧವಿತ್ತು. ಮಳೆಯಿಂದಾಗಿ ₹ 8 ರಿಂದ ₹ 10 ಲಕ್ಷ ಮೌಲ್ಯದ ಔಷಧಗಳು ಹಾಳಾಗಿವೆ’ ಎಂದು ಜಿಮ್ಸ್ ನಿರ್ದೇಶಕಿ ಡಾ. ರೇಖಾ ಸೋನಾವಣೆ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
‘ಪ್ರಾಕೃತಿಕ ವಿಕೋಪ ತಡೆಯಲು ಸಾಧ್ಯವಿಲ್ಲ. ಜಿಲ್ಲಾ ಆಸ್ಪತ್ರೆ ನೆಲಮಹಡಿಯಲ್ಲೇ ವಿದ್ಯುತ್ ಪೂರೈಕೆ ನಿರ್ವಹಣಾ ಕೊಠಡಿ ಇತ್ತು. ಆಸ್ಪತ್ರೆಗೆ ನೀರು ನುಗ್ಗಿದರೂ ಜೀವ ಹಾನಿ ಆಗಿಲ್ಲ ಎಂಬುದೇ ನೆಮ್ಮದಿ ತರಿಸಿದೆ’ ಎಂದು ಹೇಳಿದರು.
‘ಹೆಚ್ಚಿನ ಔಷಧಗಳಿಗೆ ಪ್ಲಾಸ್ಟಿಂಗ್ ಕೋಟಿಂಗ್ ಇದ್ದು, ಬಳಸಬಹುದಾಗಿದೆ. ನೀರಿನಲ್ಲಿ ತೊಯ್ದಿರುವ ಔಷಧಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಕ್ರಮವಹಿಸಿದ್ದು, ರೋಗಿಗಳಿಗೆ ಔಷಧಗಳ ಕೊರತೆ ಆಗದಂತೆ ನೋಡಿಕೊಳ್ಳಲಾಗುವುದು’ ಎಂದೂ ತಿಳಿಸಿದರು.