ನವದೆಹಲಿ: ಸತತ 10ನೇ ದಿನವೂ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗಿದ್ದು, ಈ ಬಿಕ್ಕಟ್ಟಿಗೆ ದೀರ್ಘಾವಧಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕಾರ್ಯಪ್ರವೃತ್ತವಾಗಿದೆ.
ನಿರಂತರ ಬೆಲೆ ಹೆಚ್ಚಳದಿಂದ ತತ್ತರಿಸಿರುವ ಬಳಕೆದಾರರಿಗೆ ತಕ್ಷಣ ಪರಿಹಾರ ಒದಗಿಸಲು ಎಕ್ಸೈಸ್ ಸುಂಕ ಕಡಿತಗೊಳಿಸಬೇಕೆಂಬ ಒತ್ತಡವು ಸರ್ಕಾರದ ಮೇಲೆ ಹೆಚ್ಚುತ್ತಿದೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಚಿವ ಸಂಪುಟವು ಈ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ.
‘ಜಾಗತಿಕ ವಿದ್ಯಮಾನಗಳಿಂದ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಬಗ್ಗೆ ಅನಿಶ್ಚಿತತೆ ತಲೆದೋರಿದೆ. ಈ ಬಗ್ಗೆ ತುರ್ತಾಗಿ ಗಮನ ಹರಿಸಬೇಕಾಗಿದೆ. ಈ ಬಿಕ್ಕಟ್ಟಿಗೆ ತಾತ್ಕಾಲಿಕ ಪರಿಹಾರದ ಬದಲಿಗೆ ದೀರ್ಘಾವಧಿ ಪರಿಹಾರ ಕಂಡುಕೊಳ್ಳುವ ಅಗತ್ಯ ಇದೆ. ಆ ನಿಟ್ಟಿನಲ್ಲಿ ಸರ್ಕಾರ ಕಾರ್ಯೋನ್ಮುಖವಾಗಿದೆ’ ಎಂದು ಕಾನೂನು ಸಚಿವ ರವಿಶಂಕರ ಪ್ರಸಾದ್ ಅವರು ಹೇಳಿದ್ದಾರೆ. ಸಚಿವ ಸಂಪುಟದ ಸಭೆಯ ನಂತರ ಅವರು ಸುದ್ದಿಗಾರರ ಜತೆ ಮಾತನಾಡುತ್ತಿದ್ದರು.
ದೀರ್ಘಾವಧಿ ಯೋಜನೆ ಬಗ್ಗೆ ಅವರು ಯಾವುದೇ ವಿವರಗಳನ್ನು ನೀಡಲಿಲ್ಲ. ‘ಎಕ್ಸೈಸ್ ಸುಂಕದಿಂದ ಬರುವ ವರಮಾನವನ್ನು ಹೆದ್ದಾರಿ, ಡಿಜಿಟಲ್ ಮೂಲಸೌಕರ್ಯ, ಗ್ರಾಮಗಳಿಗೆ ವಿದ್ಯುತ್, ಆಸ್ಪತ್ರೆ ಮತ್ತು ಶೈಕ್ಷಣಿಕ ಸೌಲಭ್ಯಗಳನ್ನು ಒದಗಿಸಲು ವೆಚ್ಚ ಮಾಡಲಾಗುತ್ತಿದೆ. ಇಂಧನಗಳ ಮೇಲೆ ವಿಧಿಸಲಾಗುತ್ತಿರುವ ತೆರಿಗೆಯು ನೇರವಾಗಿ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಸಂಬಂಧಿಸಿದೆ’ ಎಂದರು.
ಕೇಂದ್ರದಲ್ಲಿನ ಬಿಜೆಪಿ ನೇತೃತ್ವದ ಸರ್ಕಾರವು ಪ್ರತಿ ಹದಿನೈದು ದಿನಕ್ಕೊಮ್ಮೆ ದರ ಪರಿಷ್ಕರಣೆ ಪದ್ಧತಿ ಕೈಬಿಟ್ಟಿದೆ. ಪ್ರತಿ ದಿನ ದರ ಬದಲಿಸುವ ವ್ಯವಸ್ಥೆಯನ್ನು ಕಳೆದ ವರ್ಷದ ಜೂನ್ನಲ್ಲಿ ಜಾರಿಗೆ ತಂದಿತ್ತು. ರಾಜ್ಯಗಳ ಚುನಾವಣೆ ಸಂದರ್ಭದಲ್ಲಿ ಮಾತ್ರ ಈ ಪದ್ಧತಿ ಕೈಬಿಡಲಾಗುತ್ತಿದೆ. ಕರ್ನಾಟಕ ವಿಧಾನಸಭೆಗೆ ಚುನಾವಣೆ ನಡೆದ ಸಂದರ್ಭದಲ್ಲಿ 19 ದಿನಗಳ ಕಾಲ ದರ ಪರಿಷ್ಕರಣೆ ತಡೆ ಹಿಡಿಯಲಾಗಿತ್ತು. ಈ ತಿಂಗಳ 14 ರಿಂದ ಇದುವರೆಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕ್ರಮವಾಗಿ ₹ 2.54 ಮತ್ತು ₹ 2.41ರಷ್ಟು ತುಟ್ಟಿಯಾಗಿವೆ. ಮುಂಬೈನಲ್ಲಿ ಪೆಟ್ರೋಲ್ ದರ ₹84.99ಕ್ಕೆ ತಲುಪಿದ್ದರೆ, ಚೆನ್ನೈನಲ್ಲಿ ₹80ರ ಗಡಿ ದಾಟಿದೆ.
**
33 ಪೈಸೆ ತುಟ್ಟಿ
ಬೆಂಗಳೂರು: ನಗರದಲ್ಲಿ ಈಗಾಗಲೇ ಪೆಟ್ರೋಲ್ ಬೆಲೆ ಪ್ರತಿ ಲೀಟರ್ಗೆ ₹ 78ರ ಗಡಿ ದಾಟಿದ್ದು, ಬುಧವಾರ ಮತ್ತೆ 33 ಪೈಸೆಗಳಷ್ಟು ತುಟ್ಟಿಯಾಗಿದೆ.
ಈ ತಿಂಗಳ 14ರಂದು ಪ್ರತಿ ಲೀಟರ್ಗೆ ₹ 75.82 ರಷ್ಟಿದ್ದ ಪೆಟ್ರೋಲ್ ಬೆಲೆ, 10 ದಿನಗಳಲ್ಲಿ ₹ 2.66ರಷ್ಟು ತುಟ್ಟಿಯಾಗಿದೆ. ಡೀಸೆಲ್ ದರವು ಕೂಡ ₹ 67.08 ರಿಂದ ₹ 69.55ಕ್ಕೆ ತಲುಪಿ ₹ 2.47 ರಷ್ಟು ದುಬಾರಿಯಾಗಿದೆ.
**
ಜನರಿಗೆ ವಂಚನೆ; ಚಿದಂಬರಂ ಟೀಕೆ
‘2014 ರಿಂದ 2016ರ ಅವಧಿಯಲ್ಲಿ ಕಚ್ಚಾ ತೈಲದ ಬೆಲೆ ಕುಸಿದಾಗ ಪೆಟ್ರೋಲ್ ಬೆಲೆಯಲ್ಲಿ ಪ್ರತಿ ಲೀಟರ್ಗೆ ₹ 15ರಂತೆ ಉಳಿಸಬಹುದಾಗಿತ್ತು. ಆದರೆ, ಸರ್ಕಾರ ₹ 10 ರಂತೆ ಹೆಚ್ಚುವರಿ ಸುಂಕ ವಿಧಿಸಿತ್ತು.
ಇದರಿಂದ ಸರ್ಕಾರಕ್ಕೆ ಬೊಕ್ಕಸಕ್ಕೆ ಪ್ರತಿ ಲೀಟರ್ಗೆ ₹ 25ರಂತೆ ಹೆಚ್ಚುವರಿ ವರಮಾನ ಹರಿದು ಬಂದಿತ್ತು. ಈ ಮೊತ್ತವು ನ್ಯಾಯಯುತವಾಗಿ ಬಳಕೆದಾರರಿಗೆ ಸೇರಬೇಕಾಗಿದೆ. ಪ್ರತಿ ಲೀಟರ್ ಬೆಲೆಯನ್ನು ₹ 25ರಂತೆ ಕಡಿತಗೊಳಿಸಬಹುದಾಗಿದೆ.
ಆದರೆ, ಸರ್ಕಾರ ಅದನ್ನು ಕಾರ್ಯಗತಗೊಳಿಸುತ್ತಿಲ್ಲ. ಎಕ್ಸೈಸ್ ಸುಂಕದಲ್ಲಿ ₹ 1 ಅಥವಾ ₹ 2 ಕಡಿತಗೊಳಿಸಿ ಜನರನ್ನು ವಂಚಿಸಲಾಗುತ್ತಿದೆ’ ಎಂದು ಕಾಂಗ್ರೆಸ್ ಮುಖಂಡ ಪಿ. ಚಿದಂಬರಂ ಟ್ವೀಟರ್ನಲ್ಲಿ ಟೀಕಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.