ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬನ್ನೇರುಘಟ್ಟಕ್ಕೆ ಗೌರಿ

Last Updated 8 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ (ಬಿಬಿಪಿ) ಹೊಸ ಅತಿಥಿಯಾಗಿ ಜಿರಾಫೆಯೊಂದು ಬಂದಿದೆ. ಪ್ರವಾಸಿಗರನ್ನು ಮತ್ತು ಪ್ರಾಣಿಪ್ರಿಯರನ್ನು ಸೆಳೆಯುತ್ತಿದೆ. ಮೈಸೂರಿನ ಮೃಗಾಲಯದಲ್ಲಿದ್ದ ಎರಡೂಕಾಲು ವರ್ಷದ ಗೌರಿ ಎಂಬ ಜಿರಾಫೆಯನ್ನು ಇತ್ತೀಚೆಗಷ್ಟೇ ಬಿಬಿಪಿಗೆ ತರಲಾಗಿದ್ದು, ಅದೀಗ ಪ್ರವಾಸಿಗರ ಆಕರ್ಷಣೆಯ ಕೇಂದ್ರ ಬಿಂದು.

ಸುಮಾರು 1808 ಎಕರೆ ವಿಸ್ತೀರ್ಣದ ಜೈವಿಕ ಉದ್ಯಾನದಲ್ಲಿ 60 ಎಕರೆ ಪ್ರದೇಶದಲ್ಲಿ ಪ್ರಾಣಿ ಸಂಗ್ರಹಾಲಯ ಇದೆ. ಇಲ್ಲಿ 98 ಪ್ರಭೇದಗಳ ಒಟ್ಟು 1948 ಪ್ರಾಣಿ, ಪಕ್ಷಿ ಮತ್ತು ಉರಗಗಳಿವೆ. ಆದರೆ ಜಿರಾಫೆ ಇರಲಿಲ್ಲ. ಸುಮಾರು ಆರುವರ್ಷಗಳ ಸತತ ಪ್ರಯತ್ನದ ಫಲವಾಗಿ ಈ ಕೊರಗು ನೀಗಿದೆ. ಜಿರಾಫೆಗಾಗಿಯೇ ಇಲ್ಲಿನ ಒಂದು ಎಕರೆ ಪ್ರದೇಶದಲ್ಲಿ ಆವರಣ ನಿರ್ಮಿಸಲಾಗಿದೆ. ಪ್ರವಾಸಿಗರ ವೀಕ್ಷಣೆಗೂ ಅವಕಾಶ ಒದಗಿಸಲಾಗಿದೆ. ಗೌರಿಯ ಆಹಾರಕ್ಕೆಂದು ಸುಮಾರು 12 ಅಡಿ ಎತ್ತರದಲ್ಲಿ ಬೇವು, ಅರಳಿ, ಆಲದ ಎಲೆಗಳನ್ನು ಕಟ್ಟಲಾಗುತ್ತಿದೆ.

ಜಿರಾಫೆಯ ಪಾಲನೆ ಮತ್ತು ನಿರ್ವಹಣೆಗೆ ಪ್ರಾಣಿ ಪಾಲಕರಾದ ಪ್ರಭು ಶಂಕರ ಮತ್ತು ರಾಮಸ್ವಾಮಿ ಎಂಬುವರನ್ನು ನಿಯೋಜಿಸಲಾಗಿದೆ. ಇವರಿಬ್ಬರೂ ಮೈಸೂರು ಮೃಗಾಲಯದಲ್ಲಿ ಎರಡು ತಿಂಗಳು ಜಿರಾಫೆ ತರಬೇತಿ ಪಡೆದುಕೊಂಡಿದ್ದಾರೆ. ಉದ್ಯಾನದ ವೈದ್ಯ ಡಾ. ಉಮಾಶಂಕರ್‌ ಅವರು ಜಿರಾಫೆಯ ಆರೋಗ್ಯದ ನಿಗಾ ವಹಿಸಿದ್ದಾರೆ.

ಗೌರಿಗೆ ಜೊತೆಯಾಗಿ ಗಂಡು ಜಿರಾಫೆಯೊಂದನ್ನು ತರುವ ನಿಟ್ಟಿನಲ್ಲಿ ಪ್ರಯತ್ನ ಮಾಡಬೇಕು ಎಂಬ ಮನವಿ ಪ್ರಾಣಿಪ್ರಿಯರಿಂದ ಬಂದಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಸಾಧ್ಯಾಸಾಧ್ಯತೆ ಪರಿಶೀಲಿಸುತ್ತಿದ್ದಾರೆ.

ಜಿರಾಫೆ 2017ರ ಡಿಸೆಂಬರ್‌ ಅಥವಾ ಜನವರಿಯಲ್ಲಿ ಬೆಂಗಳೂರಿಗೆ ಬರಬೇಕಿತ್ತು. ಮೈಸೂರಿನ ಮೃಗಾಲಯವು ಒಂದು ಹೆಣ್ಣು ಹಾಗೂ ಒಂದು ಗಂಡು ಜಿರಾಫೆಗಳನ್ನು ಕಳುಹಿಸುವುದಕ್ಕೆ ಒಪ್ಪಿಗೆ ಸೂಚಿಸಿತ್ತು. ಆದರೆ ಅಲ್ಲಿ 22 ವರ್ಷದ ಗಂಡು ಜಿರಾಫೆ ಕಳೆದ ವರ್ಷದ ನ.25ರಂದು ಮೃತಪಟ್ಟಿತ್ತು. ಹಾಗಾಗಿ ಒಂದು ಹೆಣ್ಣು ಜಿರಾಫೆಯನ್ನು ಮಾತ್ರ ಕಳುಹಿಸಲು ನಿರ್ಧರಿಸಲಾಗಿತ್ತು. ಅದನ್ನು ಕಳುಹಿಸುವ ಪ್ರಕ್ರಿಯೆಯೂ ತಡವಾದ್ದರಿಂದ ಪರ್ಯಾಯವಾಗಿ ಚೀನಾದಿಂದ ಜಿರಾಫೆಗಳನ್ನು ತರಿಸಿಕೊಳ್ಳುವ ಬಗ್ಗೆಯೂ ಚಿಂತನೆ ನಡೆಸಲಾಗಿತ್ತು.

ಬರಲಿದೆ ಸಿಂಹ
ಬಿಬಿಪಿಯಲ್ಲಿ ಒಟ್ಟು 19 ಸಿಂಹಗಳಿವೆ (10 ಗಂಡು, 9 ಹೆಣ್ಣು). ಅವುಗಳ ದರ್ಶನ ಭಾಗ್ಯ ಸಿಗುವುದು ಸಫಾರಿಗೆ ಹೋಗುವವರಿಗೆ ಮಾತ್ರ. ಸಫಾರಿಗೆಂದು ಪ್ರತ್ಯೇಕ ಶುಲ್ಕ ಪಾವತಿಸಿ ಹೋಗಲಾಗದವರು ಕಾಡಿನ ರಾಜನ ದರ್ಶನವಾಗಲಿಲ್ಲವಲ್ಲಾ ಎಂಬ ಬೇಸರದಿಂದಲೇ ಹಿಂದಿರುಗುತ್ತಾರೆ. ಸಿಂಹನನ್ನು ನೋಡಬೇಕು ಎಂಬ ಆಸೆ ಮಕ್ಕಳಲ್ಲಿ, ಚಿಣ್ಣರಲ್ಲಿ ಹೆಚ್ಚಿರುತ್ತದೆ. ಈ ಕುರಿತು ಸಾರ್ವಜನಿಕರು, ಪ್ರವಾಸಿಗರಿಂದ ಬೇಡಿಕೆಗಳು ಬಂದಿದ್ದು, ಅದನ್ನು ಗಂಭೀರವಾಗಿ ಪರಿಗಣಿಸಿರುವ ಬಿಬಿಪಿಯು ‘ಜೂ’ಗೆ ಒಂದು ಸಿಂಹವನ್ನೂ ತರಲಿದೆ.

‘ಈ ಕಾರ್ಯ ಎರಡು ಮೂರು ದಿನಗಳಲ್ಲಿ ಆಗಲಿದ್ದು, ಪುಟಾಣಿಗಳಿಂದ ಹಿಡಿದು ದೊಡ್ಡವರವರೆಗಿನ ಬಹುದಿನಗಳ ಬೇಡಿಕೆಯನ್ನು ಈಡೇರಿಸಿದಂತಾಗುತ್ತದೆ. ಜಿರಾಫೆ ಮತ್ತು ಸಿಂಹ ಪ್ರಾಣಿ ಸಂಗ್ರಹಾಲಯದ ನೂತನ ಆಕರ್ಷಣೆಗಳಾಗಲಿವೆ’ ಎಂದು ಮಾಹಿತಿಯನ್ನು ಬಿಬಿಪಿಯ ಕಾರ್ಯನಿರ್ವಹಣಾಧಿಕಾರಿ ಆರ್‌. ಗೋಕುಲ್‌ ನೀಡಿದ್ದಾರೆ.

ನೀರಿನ ಕೊರತೆಯಿಲ್ಲ
ಬಿಬಿಎಂಪಿ ವ್ಯಾಪ್ತಿಯಲ್ಲಿ ದೀಪನಕೆರೆ, ಚನ್ನಮ್ಮನಕೆರೆ, ಗೌಡನಕೆರೆ, ಸೀಗಡಿಕುಂಟೆ ಸೇರಿ ಆರು ಕೆರೆಗಳಿವೆ. ಕಳೆದ ವರ್ಷ ಚೆನ್ನಾಗಿ ಮಳೆಯಾಗಿರುವ ಕಾರಣ ಈ ಕೆರೆಗಳಲ್ಲಿ ನೀರಿನ ಸಂಗ್ರಹ ಇನ್ನೂ ಇದೆ. ಹಾಗಾಗಿ ಬೇಸಿಗೆಯಲ್ಲಿ ಪ್ರಾಣಿಗಳಿಗೆ ನೀರಿನ ಕೊರತೆ ಎದುರಾಗದು.

ವಾರಾಂತ್ಯದ ಸಫಾರಿ ಶುಲ್ಕ ಹೆಚ್ಚಳ
ಬಿಬಿಪಿಯು ವಾರಾಂತ್ಯ ಮತ್ತು ಸರ್ಕಾರಿ ರಜಾ ದಿನಗಳಂದಿನ ಸಫಾರಿ ಶುಲ್ಕವನ್ನು ಮಾರ್ಚ್‌ ಒಂದರಿಂದ ಹೆಚ್ಚಿಸಿದೆ. ಈ ಹಿಂದೆ ತಲಾ ₹ 260 ಇದ್ದ ಶುಲ್ಕವನ್ನು ₹ 280ಕ್ಕೆ ಹೆಚ್ಚಿಸಲಾಗಿದೆ. ಉಳಿದ ದಿನಗಳಂದು ಸಫಾರಿ ಶುಲ್ಕ ₹ 260 ಇರಲಿದೆ. 12 ವರ್ಷದೊಳಗಿನ ವಿದ್ಯಾರ್ಥಿಗಳಿಗೆ ಜೂ ಪ್ರವೇಶ ಶುಲ್ಕವನ್ನು ಎಲ್ಲ ದಿನಕ್ಕೂ ಅನ್ವಯವಾಗುವಂತೆ ₹ 40 ರಿಂದ ₹ 20 ಇಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT