ಲಕ್ಷ್ಮೇಶ್ವರ: ‘ಚುನಾವಣೆಯಲ್ಲಿ ಹಣ ನೋಡಬೇಡಿ, ಜಾತಿ ಎಣಿಸಬೇಡಿ ಜೆಡಿಎಸ್ಗೆ ಕೇವಲ ಐದು ವರ್ಷ ಸಂಪೂರ್ಣ ಅಧಿಕಾರದ ಆಶೀರ್ವಾದ ಮಾಡಿರಿ’ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ತಾಲ್ಲೂಕಿನ ಅಭಿಮಾನಿಗಳ ಭೇಟಿಗೆ ಸೋಮವಾರ ಆಗಮಿಸಿದ್ದ ಅವರು ಸಮೀಪದ ಬಾಲೆಹೊಸೂರಿಗೆ ತೆರಳುವ ಮಾರ್ಗ ಮಧ್ಯದ ಸೂರಣಗಿ ಗ್ರಾಮದಲ್ಲಿ ಅಭಿಮಾನಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.
’75 ವರ್ಷಗಳಿಂದ ಕಾಂಗ್ರೆಸ್, ಬಿಜೆಪಿ ಸೇರಿದಂತೆ ಎಲ್ಲ ಪಕ್ಷಗಳ ಅಧಿಕಾರ ಅನುಭವಿಸಿದ್ದೀರಿ. ನಾನು 20 ವರ್ಷ ಅಧಿಕಾರ ಕೊಡಿ ಎಂದು ಬೇಡುವುದಿಲ್ಲ. ಇನ್ನೊಬ್ಬರ ಜೊತೆ ಅಧಿಕಾರ ನಡೆಸುವುದು ಕಷ್ಟ. ಹೀಗಾಗಿ ಸಂಪೂರ್ಣ ಅಧಿಕಾರವನ್ನು ನೀಡಿ’ ಎಂದು ಮನವಿ ಮಾಡಿದರು.
ನಂತರ ಬಾಲೆಹೊಸೂರಿನ ದಿಂಗಾಲೇಶ್ವರ ಮಠಕ್ಕೆ ತೆರಳಿದ ಅವರು ಸ್ವಾಮೀಜಿ ಅವರಿಂದ ಆಶೀರ್ವಾದ ಪಡೆದುಕೊಂಡರು. ಇದೇ ಸಂದರ್ಭದಲ್ಲಿ ನೂರಾರು ಅಭಿಮಾನಿಗಳನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡರು.
ಶಾಸಕ ಎಚ್.ಎನ್. ಕೋನರೆಡ್ಡಿ, ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಅಂದಾನಯ್ಯ ಕುರ್ತುಕೋಟಿಮಠ, ಪ್ರಧಾನ ಕಾರ್ಯದರ್ಶಿ ಶಂಕರ ಬಾಳಿಕಾಯಿ, ತಾಲ್ಲೂಕು ಘಟಕದ ಅಧ್ಯಕ್ಷ ಪದ್ಮರಾಜ ಪಾಟೀಲ, ಜಾಕೀರ್ಹುಸೇನ್ ಹವಾಲ್ದಾರ, ವಿಜಯ ಆಲೂರ ಇದ್ದರು.