ಗದಗ: ಕೇಂದ್ರ ಸರ್ಕಾರದ ಬಲವಂತದ ಹಿಂದಿ ಹೇರಿಕೆ ಕ್ರಮವನ್ನು ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಶನಿವಾರ ಗದುಗಿನಲ್ಲಿ ತೊಳಿಗೆ ಕಪ್ಪುಪಟ್ಟಿ ಕಟ್ಟಿಕೊಂಡು ಪ್ರತಿಭಟನೆ ನಡೆಸಿ, ಕರಾಳ ದಿನ ಆಚರಿಸಿದರು.
ಇಲ್ಲಿನ ಮಹಾತ್ಮಗಾಂಧಿ ವೃತ್ತದಲ್ಲಿ ಸೇರಿದ ಕಾರ್ಯಕರ್ತರು, ‘ಕೇಂದ್ರ ಸರ್ಕಾರವು ದಕ್ಷಿಣ ಭಾರತದ ರಾಜ್ಯಗಳ ಮೇಲೆ ಬಲವಂತವಾಗಿ ಹಿಂದಿ ಹೇರುವ ಕೆಲಸವನ್ನು ಮಾಡುತ್ತಿದೆ. ಇದರು ಸರಿಯಲ್ಲ. ಕೇಂದ್ರದ ಈ ನಡೆಯಿಂದ ಸ್ಥಳೀಯ ಭಾಷೆಗೆ ಧಕ್ಕೆಯಾಗುತ್ತದೆ. ದೇಶದಲ್ಲಿ ನಾನಾ ಭಾಷೆಗಳಿದ್ದು, ಎಲ್ಲವೂ ಸಮಾನ ಸ್ಥಾನಮಾನ ಹೊಂದಿವೆ’ ಎಂದರು.
‘ಬ್ಯಾಂಕುಗಳು, ಅಂಚೆ ಕಚೇರಿ, ರೈಲ್ವೆ ನಿಲ್ದಾಣ ಸೇರಿದಂತೆ ಕೇಂದ್ರ ಸರ್ಕಾರದ ಎಲ್ಲ ಕಚೇರಿಗಳಲ್ಲಿ ಹಿಂದಿ ದಿವಸ್ ಆಚರಿಸುವ ಮೂಲಕ ಕೇಂದ್ರ ಸರ್ಕಾರವು ಹಿಂದಿ ಹೇರಿಕೆಯನ್ನು ಸಮರ್ಥಿಸಿಕೊಳ್ಳುತ್ತಿದೆ’ ಎಂದು ದೂರಿದರು.
‘ಹಿಂದಿ ದಿವಸ' ಆಚರಣೆ ಕೈಬಿಡಬೇಕು. ರಾಜ್ಯದ ಸಂಸದರು ಸಹ ಹಿಂದಿ ಹೇರಿಕೆ ವಿರುದ್ಧ ಧ್ವನಿ ಎತ್ತಬೇಕು’ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಸಂಘಟನೆಯ ಜಿಲ್ಲಾ ಅಧ್ಯಕ್ಷ ಹನುಮಂತ ಎಚ್.ಅಬ್ಬಿಗೇರಿ, ಶರಣು ಎಸ್.ಗೋಡಿ, ಹಾಲಪ್ಪ ಅರಹುಣಸಿ, ನಿಂಗನಗೌಡ ಮಾಲೀಪಾಟೀಲ, ನಿಂಗಪ್ಪ ಹೊನ್ನಾಪೂರ, ನೀಲನಗೌಡ ಪಾಟೀಲ, ಗುರು ಮುರಾರಿ, ಆಶಾ ಜಿ., ಶ್ರೀನಿವಾಸ ಕೆ., ರಜಾಕ್ ಡಲಾಯತ್, ಲಕ್ಷ್ಮಿ ಹಿತ್ತಲಮನಿ, ಲಖನ್ ಸಿಂಗ್, ವಿನಾಯಕ ಬದಿ ಇದ್ದರು.