ಗದಗ: ನಗರದ ದಾಸರ ಓಣಿಯಲ್ಲಿರುವ ಕಾಮ ರತಿ ಉತ್ಸವ ಸಮಿತಿ ವತಿಯಿಂದ 153ನೇ ವರ್ಷದ ಕಾಮ ರತಿ ಪ್ರತಿಷ್ಠಾಪನೆ ಮಾಡಲಾಗಿದೆ.
‘ಬೇಡಿದ ವರ ನೀಡುವ ಕಾಮ–ರತಿ’ ಎಂದೇ ಪ್ರಸಿದ್ಧಿಯಾಗಿದ್ದು, ಈ ಮೂರ್ತಿಗಳನ್ನು ನೋಡಲು ಸ್ಥಳೀಯರಷ್ಟೇ ಅಲ್ಲದೇ ಅಕ್ಕದ ಪಕ್ಕದ ಜಿಲ್ಲೆಗಳಿಂದಲೂ ಬರುತ್ತಾರೆ’ ಎಂದು ಸಮಿತಿಯವರು ತಿಳಿಸಿದ್ದಾರೆ.
ಹೋಳಿ ಹುಣ್ಣಿಮೆಯ ಸಂದರ್ಭದಲ್ಲಿ ಪ್ರತಿಷ್ಠಾಪನೆಗೊಳ್ಳುವ ಕಾಮರತಿಗೆ ನಾಲ್ಕನೇ ದಿನದಂದು ಓಣಿಯ ಜನರು ತಮ್ಮ ಮನೆಯಲ್ಲಿರುವ ಬಂಗಾದ ಆಭರಣಗಳನ್ನು ತಂದು ರತಿಯನ್ನು ಸಿಂಗರಿಸುತ್ತಾರೆ. ಹೀಗೆ ಮಾಡುವುದರಿಂದ ಮುಂದಿನ ವರ್ಷದ ವೇಳೆಗೆ ಚಿನ್ನ ಅಕ್ಷಯಗೊಳ್ಳುತ್ತದೆ ಎಂಬ ನಂಬಿಕೆ ಇದೆ.
1869ರಲ್ಲಿ ಕೊಪ್ಪಳ ಜಿಲ್ಲೆಯ ಕಿನ್ನಾಳದಲ್ಲಿ ಕಾಮ ರತಿ ಮೂರ್ತಿಯನ್ನು ತಯಾರಿಸಲಾಗಿದ್ದು, ಇಂದಿನವರೆಗೂ ಅದೇ ಮೂರ್ತಿಯನ್ನು ಪ್ರತಿಷ್ಠಾಪಿಸುತ್ತ ಬರಲಾಗುತ್ತಿದೆ. ಹುಣ್ಣಿಮೆಯ ದಿವಸ ಪ್ರತಿಷ್ಠಾಪಿಸಿ ಆರನೇ ದಿವಸ ರಂಗ ಪಂಚಮಿಯಂದು ಕಾಮ ರತಿಯನ್ನು ಸಿಂಗರಿಸಿ ನಗರದ ವಿವಿಧೆಡೆ ಮೆರವಣಿಗೆ ಮಾಡಲಾಗುತ್ತದೆ.