ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರಧ್ವಜದ ತತ್ವ ಅಳವಡಿಸಿಕೊಂಡು ಮುನ್ನಡೆಯಿರಿ

ಜಿಲ್ಲಾ ಕ್ರೀಡಾಂಗಣದಲ್ಲಿ ಸಾರ್ವಜನಿಕ ಧ್ವಜಾರೋಹಣ ನೆರವೇರಿಸಿದ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್.
Last Updated 15 ಆಗಸ್ಟ್ 2022, 16:28 IST
ಅಕ್ಷರ ಗಾತ್ರ

ಗದಗ: ‘ದೇಶದ ಸ್ವಾತಂತ್ರ್ಯ ಚಳವಳಿಗೆ ನಿಖರ ಚೌಕಟ್ಟು ಮತ್ತು ಸ್ವರೂಪ ನೀಡಿದವರು ಮಹಾತ್ಮ ಗಾಂಧೀಜಿ. ಅವರ ನೇತೃತ್ವದಲ್ಲಿ ಸ್ವಾತಂತ್ರ್ಯ ಸಂಗ್ರಾಮವು ಅಹಿಂಸೆ ಮತ್ತು ಸತ್ಯಾಗ್ರಹದ ಮೂಲಕ ಸಾಗಿತು. ನೆಹರೂ, ಪಟೇಲ್ ಸೇರಿದಂತೆ ಸಾವಿರಾರು ನಾಯಕರ ಮುಂದಾಳತ್ವದಲ್ಲಿ ನಡೆದ ಹೋರಾಟದಲ್ಲಿ ಹಲವರ ತ್ಯಾಗ, ಬಲಿದಾನವಾಗಿದೆ. ಇವರೆಲ್ಲರ ಸಮರ್ಪಣಾ ಭಾವದಿಂದಾಗಿ ನಮಗೆ ಸ್ವಾತಂತ್ರ್ಯ ಲಭಿಸಿತು’ ಎಂದು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಹೇಳಿದರು.

ನಗರದ ಕೆ.ಎಚ್.ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಸ್ವಾತಂತ್ರೋತ್ಸವದ ಸಾರ್ವಜನಿಕ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

‘ತೀವ್ರಗಾಮಿ ನಾಯಕರಾದ ಲಾಲ್‌ ಬಾಲ್‌ ಪಾಲ್‌ ಅವರಿಂದ ಸ್ವಾತಂತ್ರ್ಯ ಹೋರಾಟವು ತೀವ್ರ ಸ್ವರೂಪ ಪಡೆಯಿತು. ಭಗತ್‌ಸಿಂಗ್, ಚಂದ್ರಶೇಖರ ಆಜಾದ್‌, ಸುಭಾಷ್‌ಚಂದ್ರ ಬೋಸ್‌ ಅವರಂತಹ ಕ್ರಾಂತಿಕಾರಿಗಳು ಬ್ರಿಟಿಷರ ಎದೆ ನಡುಗಿಸಿದ್ದರು’ ಎಂದು ಹೇಳಿದರು.

ಈ ವರ್ಷ ಪ್ರಧಾನಮಂತ್ರಿ ಮೋದಿ ಅವರ ಆಶಯದಂತೆ ಹರ್‌ ಘರ್‌ ತಿರಂಗಾ ಆಚರಣೆ ಮಾಡಲಾಗುತ್ತಿದೆ. ರಾಷ್ಟ್ರಧ್ವಜ ನಮ್ಮ ದೇಶದ ಸಾರ್ವಭೌಮತ್ವದ ಪ್ರತೀಕ. ರಾಷ್ಟ್ರಧ್ವಜದ ತತ್ವಗಳಾದ ಸತ್ಯ, ತ್ಯಾಗ, ಶಾಂತಿಯನ್ನು ನಾವೆಲ್ಲರೂ ಅಳವಡಿಸಿಕೊಂಡು ಅಭಿವೃದ್ಧಿ ಪಥದತ್ತ ಸಾಗಬೇಕಿದೆ’ ಎಂದು ಅಭಿಪ್ರಾಯಪಟ್ಟರು.

ಕೃಷಿ ಸಮ್ಮಾನ್‌ ನಿಧಿ ಯೋಜನೆಯಡಿ ಜಿಲ್ಲೆಯ 1,31,047 ರೈತರ ಖಾತೆಗಳಿಗೆ ವಾರ್ಷಿಕ ತಲಾ ₹10 ಸಾವಿರದಂತೆ ₹78.62 ಕೋಟಿಗಳನ್ನು ನೇರವಾಗಿ ಜಮಾ ಮಾಡಲಾಗಿದೆ. 2021-22ನೇ ಸಾಲಿನಲ್ಲಿ ₹365 ಕೋಟಿ ವೆಚ್ಚದಲ್ಲಿ 190 ಕಿ.ಮೀ. ರಾಜ್ಯ ಹೆದ್ದಾರಿ ಹಾಗೂ ಜಿಲ್ಲಾ ಮುಖ್ಯರಸ್ತೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ₹39 ಕೋಟಿ ವೆಚ್ಚದಲ್ಲಿ 135 ಶಾಲಾ ಕೊಠಡಿಗಳನ್ನು ನಿರ್ಮಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ 398 ಕಿ.ಮೀ. ರಸ್ತೆ ಅಭಿವೃದ್ಧಿ ಪಡಿಸಲು ₹332 ಕೋಟಿ ಹಾಗೂ ಶಾಲಾ, ನ್ಯಾಯಾಂಗ ಕಟ್ಟಡ ನಿರ್ಮಾಣಕ್ಕೆ ₹7.72 ಕೋಟಿ ವೆಚ್ಚ ಮಾಡಲು ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.

ಜಿಲ್ಲಾ ಪಂಚಾಯ್ತಿ, ಆರೋಗ್ಯ ಇಲಾಖೆ, ಸಮಾಜ ಕಲ್ಯಾಣ, ಹಿಂದುಳಿದ ವರ್ಗ, ಅಲ್ಪಸಂಖ್ಯಾತ, ಶಿಕ್ಷಣ, ಕಾರ್ಮಿಕ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಭಿವೃದ್ಧಿಯ ಪಕ್ಷಿನೋಟವನ್ನು ಸ್ವಾತಂತ್ರೋತ್ಸವದ ಸಂದೇಶದಲ್ಲಿ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಪ್ರಸ್ತಾಪಿಸಿದರು.

ಶಾಸಕ ಎಚ್.ಕೆ.ಪಾಟೀಲ, ವಿಧಾನ ಪರಿಷತ್‌ ಸದಸ್ಯ ಎಸ್.ವಿ.ಸಂಕನೂರ, ಎಂ.ಸಿ.ಎ.ಅಧ್ಯಕ್ಷ ಎಂ.ಎಸ್.ಕರಿಗೌಡ್ರ, ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿದ್ದು ಪಲ್ಲೇದ, ಗದಗ-ಬೆಟಗೇರಿ ನಗರಸಭೆ ಅಧ್ಯಕ್ಷೆ ಉಷಾ ದಾಸರ, ಉಪಾಧ್ಯಕ್ಷೆ ಸುನಂದಾ ಬಾಕಳೆ, ಜಿಲ್ಲಾ ಪಂಚಾಯ್ತಿ ಸಿಇಒ ಡಾ.ಸುಶೀಲಾ ಬಿ., ಎಸ್‌ಪಿ ಶಿವಪ್ರಕಾಶ್‌ ದೇವರಾಜು, ಡಿಸಿಎಫ್‌ ದೀಪಿಕಾ ಬಾಜಪೇಯಿ, ಪ್ರಭಾರ ಎಡಿಸಿ ಜಿಲ್ಲಾಧಿಕಾರಿ ಅನ್ನಪೂರ್ಣ, ತಹಶೀಲ್ದಾರ್‌ ಕಿಶನ್‌ ಕಲಾಲ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ವೀರಯ್ಯಸ್ವಾಮಿ ಹಿರೇಮಠ, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ವಿಠ್ಠಲ ಜಾಬಗೌಡರ ಇದ್ದರು.

ಸೆಂಟ್ ಜಾನ್ಸ್‌ ಪ್ರೌಢಶಾಲೆ, ತೋಂಟದಾರ್ಯ ಪ್ರೌಢಶಾಲೆ, ಸಿ.ಎಸ್.ಪಾಟೀಲ ಬಾಲಕಿಯ ಪ್ರೌಢಶಾಲೆ, ಎಸ್.ಎಸ್.ಕೆ. ಪ್ರೌಢಶಾಲೆ ಹಾಗೂ ಮಂಜು ಪ್ರೌಢಶಾಲೆ ವಿದ್ಯಾರ್ಥಿಗಳು ದೇಶ ಭಕ್ತಿಗೀತೆಗಳಿಗೆ ಸಾಮೂಹಿಕ ನೃತ್ಯ ಪ್ರದರ್ಶಿಸಿದರು.

ಆಕರ್ಷಕ ಪಥ ಸಂಚಲನ

ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಅವರು ಸೋಮವಾರ ಬೆಳಿಗ್ಗೆ 9ಕ್ಕೆ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ವಿವಿಧ ದಳಗಳ ವೀಕ್ಷಣೆ ಮಾಡಿದರು.

ನಂತರ ನಡೆದ ಆಕರ್ಷಕ ಪಥಸಂಚಲನದ ನೇತೃತ್ವವನ್ನು ಪರೇಡ್‌ ಕಮಾಂಡರ್‌ ಶಂಕರಗೌಡ ಚೌದರಿ ವಹಿಸಿದ್ದರು. ಜಿಲ್ಲಾ ಪೊಲೀಸ್‌ ಬ್ಯಾಂಡ್‌ನ ಹಿಮ್ಮೇಳದಲ್ಲಿ ಜಿಲ್ಲಾ ಸಶಸ್ತ್ರ ಮೀಸಲು ಪಡೆ, ಜಿಲ್ಲಾ ಪೊಲೀಸ್‌, ನಾಗರಿಕ ಪೊಲೀಸ್‌ ಪಡೆ, ಗೃಹರಕ್ಷಕ ದಳ, ಅಗ್ನಿಶಾಮಕ ದಳ, ಅಬಕಾರಿ ಇಲಾಖೆ, ಅರಣ್ಯ ಇಲಾಖೆ, ಎನ್‌ಸಿಸಿ ಹಾಗೂ ಸೇವಾದಳ ತಂಡಗಳು ಶಿಸ್ತಿನ ಹೆಜ್ಜೆ ಹಾಕಿ ಜಿಲ್ಲಾಧಿಕಾರಿಗೆ ಗೌರವವಂದನೆ ಸಲ್ಲಿಸಿದವು.

ಸ್ವಾತಂತ್ರ್ಯ ದಿನದಂದು ಸಾಧಕರಿಗೆ ಸನ್ಮಾನ

ರಾಜ್ಯ ಮಟ್ಟದ ಪುಸ್ತಕ ಪ್ರಕಾಶಕರ ಸಮ್ಮೇಳನದಲ್ಲಿ ಭಾಗವಹಿಸಿದ್ದ ಜ್ಯೋತಿ ಲೋಣಿ, ಡಾ.ವಿಶ್ವನಾಥ ಹಿರೇಮಠ (ಸಂಗೀತ ಕ್ಷೇತ್ರ), ಅಮೆರಿಕ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್‌ ಪದವಿ ಪಡೆದ ಕಿಶೋರಬಾಬು ನಾಗರಕಟ್ಟಿ, ವಸಂತ ಎನ್.ಮಹೇಂದ್ರಕರ (ಛಾಯಾಚಿತ್ರಗ್ರಾಹಕ), ಎಚ್.ಎಂ.ಷರೀಫನವರ (ವಿಜಯಸಾಕ್ಷಿ ಸಂಪಾದಕರು), ಸಂಜೀವ ಪಾಂಡ್ರೆ (ಟಿ.ವಿ.9 ಜಿಲ್ಲಾ ವರದಿಗಾರ), ಬೀರೇಂದ್ರ ಅಣ್ಣಿಗೇರಿ (ಸಾಮಾಜಿಕ ಕ್ಷೇತ್ರ), ಡಾ.ದತ್ತಪ್ರಸನ್ನ ಪಾಟೀಲ (ನಿರೂಪಕ), ರಾಷ್ಟ್ರಪತಿಯವರ ಪೊಲೀಸ್‌ ಶ್ಲಾಘನೀಯ ಸೇವಾ ಪದಕ ಪಡೆದ ಮಾರುತಿ ಜೋಗದಂಡಕರ, ಮುಖ್ಯಮಂತ್ರಿಯವರ ಪದಕ ಪಡೆದ ವೀರಭದ್ರಪ್ಪ ಮಡಿವಾಳರ, ದ್ವಿತೀಯ ಪಿಯು ಪರೀಕ್ಷೆಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ಶಿವರಾಜ ದುರಗಪ್ಪ, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಯಿಂದ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಪುಷ್ಪಾ ಅಂಗಡಿ, ಕೀರ್ತಿ ಅಡ್ನೂರ, ಕೃಷ್ಣಪ್ರಸಾದಗೌಡ ಪಾಟೀಲ, ಸುಮಂತ್ ಇಟಗಿ, ಪ್ರೇಮಾ ಹುಚ್ಚಣ್ಣವರ, ಪ್ರಶಾಂತಗೌಡ ಬೇಲೇರಿ, ಶಾಹಿದಾಬೇಗಂ ಬಳಿಗಾರ, ಅಭಿಷೇಕ ಭಜಂತ್ರಿ, ಮಹ್ಮದ ಅಜರುದ್ದೀನ, ಹರೀಶ ಮುಟಗಾರ, ಸುಪ್ರಿಯಾ ಇಟಗಿ, ಪವಿತ್ರಾ ಕುರ್ತಕೋಟಿ, ಜ್ಯೋತಿ ಪೂಜಾರ, ಭೀಮವ್ವ ಪೂಜಾರ, ಸಿದ್ಧಾರ್ಥ ಬಂಡಿ, ಸೌಪರ್ಣಿಕಾ ಕೊಪ್ಪಳ, ಶ್ವೇತಾ ಬೆಳಗಟ್ಟಿ, ಸೋನಿಯಾ ಜಾಧವ್‌, ಶ್ವೇತಾ ಜಾಧವ, ರಾಧಿಕಾ ತೊಂಡಿಹಾಲ, ವರಲಕ್ಷ್ಮೀ ಕದಡಿ, ಭುವನೇಶ್ವರಿ ಕೋಳಿವಾಡ, ವಿಜಯಲಕ್ಷ್ಮೀ ಹುಡೇದ, ಪೂರ್ಣಿಮಾ ಛಬ್ಬಿ, ಬಸೀರಾ ವಕಾರದ, ಮೃತ್ಯುಂಜಯ ಅಮಾತ್ಯ, ಅಭಿಷೇಕ ಗಂಗನಗೌಡ್ರ, ದೀಪಾ ಬಹೇರಮಠ (ಕ್ರೀಡಾ ಕ್ಷೇತ್ರ).

ರಾಷ್ಟ್ರಧ್ವಜದ ತತ್ವಗಳಾದ ಸತ್ಯ, ತ್ಯಾಗ, ಶಾಂತಿಯನ್ನು ನಾವೆಲ್ಲರೂ ಅಳವಡಿಸಿಕೊಂಡು ಅಭಿವೃದ್ಧಿ ಪಥದತ್ತ ಸಾಗಬೇಕಿದೆ
ವೈಶಾಲಿ.ಎಂ.ಎಲ್., ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT