ಲಕ್ಷ್ಮೇಶ್ವರ: ಸಮೀಪದ ಹರದಗಟ್ಟಿ-ಹಿರೇಮಲ್ಲಾಪುರ ಗ್ರಾಮಗಳ ವ್ಯಾಪ್ತಿಯ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಕಳೆದ ಎರಡು ತಿಂಗಳಲ್ಲಿ, ಎರಡು ಕಡೆ ಕೃಷ್ಣಮೃಗದ ಕಳೇಬರ ಪತ್ತೆಯಾಗಿದ್ದು, ಗ್ರಾಮಸ್ಥರು ಇಲ್ಲಿ ಬೇಟೆ ನಡೆಯುತ್ತಿರುವ ಕುರಿತು ಶಂಕೆ ವ್ಯಕ್ತಪಡಿಸಿದ್ದಾರೆ.
94 ಹೆಕ್ಟೇರ್ನಲ್ಲಿ ಈ ಮೀಸಲು ಅರಣ್ಯ ಹಬ್ಬಿಕೊಂಡಿದ್ದು, ಕುರುಚಲು ಗಿಡಗಳು ಬೆಳೆದಿದೆ. ಇಲ್ಲಿ ಜಿಂಕೆ ಹಾಗೂ ಕೃಷ್ಣಮೃಗಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಬೇಟೆಗಾರರ ಕಣ್ಣು ಮೀಸಲು ಅರಣ್ಯದ ಮೇಲೆ ಬಿದ್ದಿದ.
ಇಲ್ಲಿನ ಕಣಕಪ್ಪನ ಕಟ್ಟೆ ಹತ್ತಿರದ ಸಣ್ಣ ನೀರಿನ ಗುಂಡಿಯಲ್ಲಿ ಶನಿವಾರ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಕೃಷ್ಣಮೃಗದ ಕಳೇಬರ ಕಂಡು ಬಂದಿದೆ. ಇದನ್ನೂ ಮುನ್ನ ಅರಣ್ಯದಲ್ಲಿ ಇನ್ನೊಂದೆಡೆ ಕೃಷ್ಣಮೃಗದ ಕಳೇಬರ ಕಂಡುಬಂದಿತ್ತು. ಅರಣ್ಯ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಹಿರೇಮಲ್ಲಾಪುರ ಗ್ರಾಮದ ನಿವಾಸಿ ಮಲ್ಲು ಕಡಕೋಳ ಆಗ್ರಹಿಸಿದರು.
‘ಕಾಯ್ದಿಟ್ಟ ಅರಣ್ಯದಲ್ಲಿ ಅನುಮತಿ ಇಲ್ಲದೆ ಪ್ರವೇಶ ಮಾಡುವುದು,ಪ್ರಾಣಿಗಳ ಬೇಟೆಯಾಡುವುದು ಅಪರಾಧ. ಬೇಟೆಗಾರರ ವಿರುದ್ಧ ಕಠಿಣ ಕ್ರಮಕೈಗೊಳ್ಳುತ್ತೇವೆ. ಗುಂಡಿಯಲ್ಲಿನ ನೀರು ಕುಡಿಯಲು ಹೋದಾಗ ಕಾಲು ಜಾರಿಯೂ ಕೃಷ್ಣಮೃಗ ಸತ್ತಿರಬಹುದು’ ಎಂದು ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಸತೀಶ ಪೂಜಾರ ‘ಪ್ರಜಾವಾಣಿ’ಗೆ ತಿಳಿಸಿದರು.