ನರೇಗಲ್: ಸೂಕ್ಷ್ಮ ಪರಿಸರ ಹಾಗೂ ಜೀವ ವೈವಿಧ್ಯಗಳ ತಾಣ ಪಶ್ಚಿಮ ಘಟ್ಟ ಸಂರಕ್ಷಣೆ ಕುರಿತು ಡಾ.ಕಸ್ತೂರಿ ರಂಗನ್ ಸಮಿತಿ ನೀಡಿರುವ ವರದಿಯನ್ನು ಸರ್ಕಾರ ಜಾರಿಗೊಳಿಸಬೇಕು ಇಲ್ಲದಿದ್ದರೆ ಭಾರಿ ಪ್ರಮಾಣದ ಪ್ರಕೃತಿ ವಿಕೋಪಗಳು ಘಟಿಸಿ ಸಾವು– ನೋವುಗಳು ಘಟಿಸಲು ಕಾರಣವಾಗುತ್ತದೆ ಎಂದು ಹಾಲಕೆರೆಯ ಅನ್ನದಾನ ಸ್ವಾಮೀಜಿ ಹೇಳಿದರು.
ಪಟ್ಟಣದ ಅನ್ನದಾನೇಶ್ವರ ಮಠದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪ್ರಕೃತಿ ವಿಕೋಪದಿಂದಾಗಿ ಕೋಡಗು ಜಿಲ್ಲೆಯಲ್ಲಿ ಆದ ಅಪಾರ ಪ್ರಮಾಣದ ಹಾನಿ ನಮಗೆ ನೋವು ತಂದಿದೆ. ಅವರ ಪುನರ್ವಸತಿಗಾಗಿ ಹೊಸಪೇಟೆಯ ಕೊಟ್ಟೂರಸ್ವಾಮಿ ಕಲ್ಯಾಣ ಮಂಟಪದಿಂದ ₹ 5 ಲಕ್ಷ ಹಾಗೂ ಸ್ಥಳೀಯ ಅನ್ನದಾನ ವಿಜಯ ವಿದ್ಯಾ ಪ್ರಸಾರಕ ಸಮಿತಿಯ ವತಿಯಿಂದ ₹ 5 ಲಕ್ಷವನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ಚೆಕ್ ಮೂಲಕ ಇಂದು ಸಮರ್ಪಿಸುತ್ತಿದ್ದೇವೆ’ ಎಂದರು.
‘ಪರಿಸರ ಸಮತೋಲನ ಕಾಪಾಡಿಕೊಳ್ಳಲು ಗಿಡ ಮರಗಳನ್ನು ನೆಟ್ಟು ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ರಾಜ್ಯದ ಪ್ರತಿ ವಿದ್ಯಾ ಸಂಸ್ಥೆ ಪ್ರಕೃತಿ ಸಂರಕ್ಷಣೆಗೆ ವಿಶೇಷ ಯುವಪಡೆಯನ್ನು ರಚಿಸಬೇಕು. ಅಭಿವೃದ್ದಿ ನೆಪದಲ್ಲಿ ನಡೆಯುವ ಮರಗಳ ಮಾರಣಹೋಮ, ದೊಡ್ಡ ಪ್ರಮಾಣದ ಗಣಿಗಾರಿಕೆ, ಪರಿಸರ ಮಾಲಿನ್ಯ, ಅಕ್ರಮ ಮರಳು ಗಣಿಗಾರಿಕೆ, ಕಲ್ಲು ಗಣಿಗಾರಿಕೆಯನ್ನು ಸರ್ಕಾರ ಸಂಪೂರ್ಣ ನಿಷೇಧಿಸಬೇಕು’ ಎಂದರು.
ಆಡಳಿತಾಧಿಕಾರಿ ಎಸ್.ಜಿ.ಹಿರೇಮಠ, ಸಂಸ್ಥೆಯ ಕಾರ್ಯದರ್ಶಿ ಮಹಾಂತೇಶ ಸೋಮನಕಟ್ಟಿ, ಎ.ಪಿ.ಎಂ.ಸಿ ಉಪಾಧ್ಯಕ್ಷ ನಿಂಗನಗೌಡ ಲಕ್ಕನಗೌಡ್ರ, ಎಂ.ಎಸ್.ಧಡೆಸೂರಮಠ, ಎಫ್.ಎನ್.ಹುಡೇದ, ಸಂಗಮೇಶ ಹೂಲಗೇರಿ, ಎಂ.ಎಸ್.ಪೂಜಾರ ಇದ್ದರು.