ನರಗುಂದ (ಗದಗ ಜಿಲ್ಲೆ): ‘ರೈತರ ಹೆಸರಿನಲ್ಲಿ ರಾಜಕಾರಣ ನಡೆದು ಪ್ರಾಮಾಣಿಕ ಸಂಘಟನೆಗಳಿಗೆ ಬೆಲೆ ಇಲ್ಲದಂತಾಗಿದೆ. ರಾಜಕಾರಣ ರೈತ ಕುಲವನ್ನೇ ನಾಶ ಮಾಡುತ್ತಿದೆ’ ಎಂದು ಬಂಡಾಯ ಸಾಹಿತಿ ಅಲ್ಲಮಪ್ರಭು ಬೆಟದೂರ ಆಕ್ರೋಶ ವ್ಯಕ್ತಪಡಿಸಿದರು.
42ನೇ ಹುತಾತ್ಮ ರೈತ ದಿನಾಚರಣೆ ಅಂಗವಾಗಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತಸೇನಾ ಕರ್ನಾಟಕದ ಆಶ್ರಯದಲ್ಲಿ ‘ಮಹದಾಯಿ ಹೋರಾಟ ವೇದಿಕೆ’ಯಲ್ಲಿ ಗುರುವಾರ ನಡೆದ ರೈತ ಸಮಾವೇಶದಲ್ಲಿ ಅವರು ಮಾತನಾಡಿದರು.
‘ಹಸಿರು ಶಾಲು ಹಾಕಿಕೊಂಡು ರಾಜಕಾರಣ, ರೈತರಿಗೆ ವಂಚನೆ ಮಾಡುವುದಾದರೆ ಅವರು ರೈತ ಸಂಘಟನೆಯಿಂದ ಹೊರಹೋಗಬೇಕು. ರೈತರು ಪ್ರಾಮಾಣಿಕ ರೈತ ಸಂಘಟನೆಗಳನ್ನು ಮಾತ್ರ ಬೆಂಬಲಿಸಬೇಕು’ ಎಂದು ಮನವಿ ಮಾಡಿದರು.
ರೈತ ಸೇನಾ ಕರ್ನಾಟಕದ ರಾಜ್ಯ ಘಟಕದ ಅಧ್ಯಕ್ಷ ವೀರೇಶ ಸೊಬರದಮಠ, ‘ರೈತರ ಹೆಸರಿನಲ್ಲಿ ಪಕ್ಷಗಳು ರಾಜಕಾರಣ ಕೈಬಿಡಬೇಕು’ ಎಂದು ಆಗ್ರಹಿಸಿದರು.
ರೈತ ಸಂಘದ ಪ್ರಧಾನ ಕಾರ್ಯದರ್ಶಿ ರವಿಕಿರಣ ಪೂಣಚ್ಚ 19 ನಿರ್ಣಯಗಳನ್ನು ಮಂಡಿಸಿ, ಈ ನಿರ್ಣಯಗಳಿಗೆ ಸರ್ಕಾರ ಬದ್ಧವಾಗಬೇಕು ಎಂದು ಆಗ್ರಹಿಸಿದರು.
ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಜೆ.ಎಂ.ವೀರಸಂಗಯ್ಯ, ಪರಿವರ್ತನಾ ಸಮುದಾಯದ ಎಸ್.ಆರ್.ಹಿರೇಮಠ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿದರು.
ಸಮಾವೇಶದಲ್ಲಿ ಸಾವಿರಾರು ರೈತರು ಪಾಲ್ಗೊಂಡಿದ್ದರು. ರೈತ ವೀರಗಲ್ಲು ಬಳಿ ದಿ.ವೀರಪ್ಪ ಕಡ್ಲಿಕೊಪ್ಪರ ಸ್ಮಾರಕಕ್ಕೆ ಆಗ್ರಹಿಸಿ ಪ್ರತಿಭಟನೆಯೂ ನಡೆಯಿತು.