ಗದಗ: ಜಿಲ್ಲೆಯ ಕೋವಿಡ್ ನಿಯಂತ್ರಣ ಕುರಿತಂತೆ ಆರೋಗ್ಯ ಇಲಾಖೆ ಪ್ರಗತಿ ಪರಿಶೀಲನೆ ವೇಳೆ ಆರೋಗ್ಯ ಸಚಿವರಿಗೆ ತಪ್ಪು ಮಾಹಿತಿ ನೀಡಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಸತೀಶ್ ಬಸರಿಗಿಡದ ಅವರನ್ನು ‘ನೀನು ದನಕಾಯೋಕೆ ಹೋಗ್. ದನಕಾಯೋಕೆ ಲಾಯಕ್ಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಏಕವಚನದಲ್ಲೇ ತರಾಟಗೆ ತೆಗೆದುಕೊಂಡ ಪ್ರಸಂಗ ನಡೆಯಿತು.
ಜಿಲ್ಲಾಡಳಿತ ಭವನದಲ್ಲಿ ಶನಿವಾರ ಆರೋಗ್ಯ ಸಚಿವ ಡಾ. ಕೆ.ಸುಧಾಕರ್ ಮತ್ತು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನೇತೃತ್ವದಲ್ಲಿ ಜಿಲ್ಲೆಯ ಕೋವಿಡ್ ನಿಯಂತ್ರಣ ಕ್ರಮಗಳ ಕುರಿತು ಪ್ರಗತಿ ಪರಿಶೀಲನೆ ಸಭೆ ವೇಳೆ ಈ ಘಟನೆ ನಡೆಯಿತು.
ಆರೋಗ್ಯ ಇಲಾಖೆಗೆ ಸಂಬಂಧಿಸಿ ಆಸ್ಪತ್ರೆಗಳ ಬೆಡ್ ಸಂಖ್ಯೆ, ಮಾನವ ಸಂಪನ್ಮೂಲದ ಬಗ್ಗೆ ವಿವರಣೆ ಪಡೆದ ಆರೋಗ್ಯ ಸಚಿವರು, ಜಿಲ್ಲೆಯ ಆಂಬುಲೆನ್ಸ್ಗಳ ಬಗ್ಗೆ ಪ್ರಶ್ನಿಸಿದರು. ಅದಕ್ಕೆ ಅಧಿಕಾರಿ ವರದಿ ನೋಡಲು ಮುಂದಾದರು.
ಆಗ ಆರೋಗ್ಯ ಸಚಿವರು, ‘ಯಾಕೆ ಆಂಬುಲೆನ್ಸ್ಗಳು ಎಷ್ಟಿವೆ ಎಂಬುದೂ ನೆನೆಪಿಲ್ಲವೇ’ ಎಂದು ಪ್ರಶ್ನಿಸಿದರು. ಈ ವೇಳೆ ಡಿಎಚ್ಒ ತಡವರಿಸಿದರು.
ಇದಕ್ಕೆ ತೀವ್ರ ಬೇಸರ ವ್ಯಕ್ತಪಡಿಸಿದ ಆರೋಗ್ಯ ಸಚಿವರು, ಇಷ್ಟು ಕಡಿಮೆ ಅಂಬುಲೆನ್ಸ್ಗಳೊಂದಿಗೆ ಹೇಗೆ ಕೆಲಸ ಮಾಡುತ್ತೀರಿ? ಕೋವಿ ಡ್ ಮುಗಿ ಯುವವರಿಗೆ 10 ಆಂಬು ಲೆನ್ಸ್ಗಳನ್ನು ಬಾಡಿಗೆಗೆ ಪಡೆದು ಕೊಳ್ಳುವಂತೆ ಸೂಚಿ ಸಿದರು.
ಈ ವೇಳೆ ಪ್ರೊಜೆಕ್ಟರ್ ಪರದೆಯಲ್ಲಿ 23 ಆಂಬುಲೆನ್ಸ್ಗಳಿವೆ ಎಂದು ತೋರಿಸುತ್ತಿರುವ ಬಗ್ಗೆ ಸಚಿವರ ಆಪ್ತ ಸಹಾಯಕರು ಗಮನ ಸೆಳೆದರು.
ಇದರಿಂದ ಕೆರಳಿದ ಜಿಲ್ಲಾ ಉಸ್ತು ವಾರಿ ಸಚಿವ ಸಿ.ಸಿ.ಪಾಟೀಲ ಅಧಿಕಾರಿ ವಿರುದ್ಧ ಆಕ್ರೋಶಗೊಂಡರು. ‘ಕೋವಿ ಡ್ ಇಲ್ಲದಿದ್ದರೆ ದೀರ್ಘಾವಧಿ ರಜೆ ಮೇಲೆ ಕಳುಹಿಸುತ್ತಿದ್ದೆ’ ಎಂದು ಚಳಿ ಬಿಡಿಸಿದರು.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿ, ಕೋವಿಡ್ ಕೇರ್ ಸೆಂಟರ್ ನಲ್ಲಿ ಸೋಂಕಿತರಿಗೆ ಸರಿಯಾದ ಚಿಕಿತ್ಸೆ ನೀಡಬೇಕು. ಅನಗತ್ಯವಾಗಿ ಸೋಂಕಿತರ ಸಂಚಾರ ನಿರ್ಬಂಧಿಸಬೇಕು. ಸೋಂಕು ದೃಢಪಟ್ಟ 24 ಗಂಟೆಯೊಳಗಾಗಿ ಸೋಂಕಿತರ ಆರೋಗ್ಯ ಸ್ಥಿತಿ ಅನುಸಾರ ಕೋವಿಡ್ಆರೈಕೆ ಕೇಂದ್ರ ದಾಖಲಿಸಿ ಚಿಕಿತ್ಸೆ ನೀಡಬೇಕು ಎಂದರು.
ಶಾಸಕ ಎಚ್.ಕೆ.ಪಾಟೀಲ ಮಾತನಾಡಿ, ಸರ್ಕಾರ ಅನುಮೋದನೆ ನೀಡಿರುವ 1000 ಎಲ್ಪಿಎಂ ಆಮ್ಲ ಜನಕ ಘಟಕವನ್ನು 3000 ಎಲ್ಪಿಎಂ ಸಾಮ ರ್ಥ್ಯಕ್ಕೆ ಹೆಚ್ಚಿಸಬೆಕು. ಜಿಲ್ಲೆಗೆ ಹೆಚ್ಚಿನ ಆಮ್ಲಜನಕ ಪೂರೈಕೆ ಮಾಡಬೇಕು. ಜೊತೆಗೆ ರೆಮ್ಡಿಸಿವಿಯರ್ ಚುಚ್ಚುಮದ್ದು ಅಗತ್ಯಕ್ಕನುಸಾರ ಪೂರೈಕೆ ಮಾಡಬೇಕು ಎಂದು ಮನವಿ ಮಾಡಿದರು.
ಡಿಎಚ್ಒ ಡಾ. ಸತೀಶ ಬಸರಿಗಿಡದ ಮಾತನಾಡಿ, ಜಿಲ್ಲೆಯಲ್ಲಿ 11 ಕೋವಿಡ್ ಕೇರ್ ಸೆಂಟರ್ಗಳನ್ನು ಆರಂ ಭಿಸಲಾಗಿದೆ. ಇವುಗಳಲ್ಲಿ 1,250 ಸೋಂಕಿತರಿಗೆ ಚಿಕಿತ್ಸೆ ನೀಡಬಹುದು. ಸದ್ಯ 154 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದರು.ಶಾಸಕ ರಾಮಣ್ಣ ಲಮಾಣಿ, ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ದ್ರಾಕ್ಷಾರಸ ಮಂಡಳಿ ಅಧ್ಯಕ್ಷ ಕಾಂತಿಲಾಲ ಬನ್ಸಾಲಿ, ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು, ಸಿಇಒ ಭರತ್ ಎಸ್., ಎಸ್.ಪಿ. ಯತೀಶ್ ಎನ್. ಇದ್ದರು.
ವೈದ್ಯರ ಅಮಾನತಿಗೆ ಆಗ್ರಹ
‘ಲಕ್ಷ್ಮೇಶ್ವರ ಸಮುದಾಯದ ಆರೋಗ್ಯ ಕೇಂದ್ರದ ವೈದ್ಯರು ಕರ್ತವ್ಯಕ್ಕೆ ಹಾಜರಾಗುತ್ತಿಲ್ಲ. ವಾರಕ್ಕೊಮ್ಮೆ ಬಂದು ಸಹಿ ಮಾಡುತ್ತಾರೆ. ತಿಂಗಳ ಸಂಬಳ ಎಣಿಸುತ್ತಾರೆ’ ಎಂದು ಶಾಸಕ ರಾಮಣ್ಣ ಲಮಾಣಿ ಆರೋಗ್ಯ ಸಚಿವ ಡಾ. ಕೆ.ಸುಧಾಕರ್ ಅವರಿಗೆ ದಾಖಲೆ ಸಮೇತ ಮಾಹಿತಿ ನೀಡಿದರು.
‘ಕರ್ತವ್ಯಕ್ಕೆ ಹಾಜರಾಗದ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಲವು ಬಾರಿ ಕೇಳಿಕೊಂಡರು ಸಹ ಡಿಎಚ್ಒ ಸ್ಪಂದಿಸಿಲ್ಲ’ ಎಂದು ದೂರಿದರು.
‘ಲಕ್ಷ್ಮೇಶ್ವರ ಸಮುದಾಯ ಆರೋಗ್ಯ ಕೇಂದ್ರದ ವೈದ್ಯರ ಪೈಕಿ ನಾಲ್ವರು ಸರಿಯಾಗಿ ಕೆಲಸಕ್ಕೆ ಬರುವುದಿಲ್ಲ. ವಾರದಲ್ಲಿ ಒಮ್ಮೆ ಹಾಜರಾಗಿ, ಇನ್ನುಳಿದ ದಿನಗಳ ಹಾಜರಾತಿಗೂ ಸಹಿ ಮಾಡುತ್ತಾರೆ. ಯಾಕೆ ಅವರು ಸರ್ಕಾರದ ಸಂಬಳ ಪಡೆಯುವುದಿಲ್ಲವೇ. ತಕ್ಷಣವೇ ಅವರನ್ನು ಅಮಾನತುಗೊಳಿಸಬೇಕು’ ಎಂದು ಒತ್ತಾಯಿಸಿದರು.ಈ ಬಗ್ಗೆ ಡಿಎಚ್ಒ ಅವರನ್ನು ವಿಚಾರಿಸಿದ ಆರೋಗ್ಯ ಸಚಿವರು, ‘ಏನು ಕ್ರಮ ಕೈಗೊಂಡಿದ್ದೀರಿ’ ಎಂದು ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಡಿಎಚ್ಒ ಡಾ. ಸತೀಶ್ ಬಸರಿಗಿಡದ, ‘ನೋಟಿಸ್ ನೀಡಿ ಕಾರಣ ಕೇಳಲಾಗಿದೆ’ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.