ಗದಗ: ‘ಅಲ್ಪಸಂಖ್ಯಾತ ವರ್ಗದವರನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ 15 ಅಂಶಗಳ ಕಾರ್ಯಕ್ರಮ ವರವಾಗಿದೆ’ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರವಿ ಎಲ್.ಗುಂಜೀಕರ ಅಭಿಪ್ರಾಯಪಟ್ಟರು.
ನಗರದ ಜಾಕೀರ ಹುಸೇನ ಶಾದಿ ಮಹಲ್ನಲ್ಲಿ ನಡೆದ ಅಲ್ಪಸಂಖ್ಯಾತರ ಕಲ್ಯಾಣ ದಿನ ಆಚರಣೆ ಹಾಗೂ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಇರುವ 15 ಅಂಶಗಳ ಕಾರ್ಯಕ್ರಮದ ಜಾಗೃತಿ ಶಿಬಿರದಲ್ಲಿ ಅವರು ಮಾತನಾಡಿದರು.
‘ಅಲ್ಪಸಂಖ್ಯಾತ 15 ಅಂಶಗಳ ಕಾರ್ಯಕ್ರಮದಲ್ಲಿ ಶಿಕ್ಷಣ, ಸ್ವಾವಲಂಬನೆ ಬದುಕು ಸೇರಿದಂತೆ ಹಲವಾರು ಕಾರ್ಯಕ್ರಮಗಳಿವೆ. ಶಿಶು ಕೇಂದ್ರಿತ ಶೈಕ್ಷಣಿಕ ವ್ಯವಸ್ಥೆಯಿಂದ ಹಿಡಿದು ಉನ್ನತ ವ್ಯಾಸಂಗದವರೆಗೂ ಶೈಕ್ಷಣಿಕ ಸೌಲಭ್ಯಗಳಿವೆ. ಸ್ವಾವಲಂಬನೆ ಬದುಕಿಗಾಗಿ ಕಡಿಮೆ ಬಡ್ಡಿಯಲ್ಲಿ ಸಾಲ ವಿತರಣೆ ಸೇರಿದಂತೆ ಹಲವಾರು ಯೋಜನೆಗಳಿವೆ. ಅಲ್ಪಸಂಖ್ಯಾತ ಸಮುದಾಯದವರು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಹಾಗೂ ಅಲ್ಪಸಂಖ್ಯಾತ ನಿಗಮಕ್ಕೆ ಭೇಟಿ ನೀಡಿ ಈ ಯೋಜನೆಗಳ ಲಾಭ ಪಡೆಯಬೇಕು’ ಎಂದು ಸಲಹೆ ನೀಡಿದರು.
ಗದಗ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಅಧ್ಯಕ್ಷ ಎಸ್.ಜಿ.ಸಲಗರೆ ಮಾತನಾಡಿ, ‘ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಇರುವ ಕೇಂದ್ರ ಮತ್ತು ರಾಜ್ಯದ ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಅರಿವು ಮೂಡಿಸುವ ಜಾಗೃತಿ ಶಿಬಿರ ಪ್ರತಿ ತಿಂಗಳಿಗೊಮ್ಮೆ ನಡೆಯಬೇಕಿದೆ. ಆಗ ಮಾತ್ರ ಸದೃಢ ಅಲ್ಪಸಂಖ್ಯಾತ ಸಮುದಾಯ ನಿರ್ಮಿಸಲು ಸಾಧ್ಯ. ಅಲ್ಪಸಂಖ್ಯಾತರು ಇಲಾಖೆ ಹಾಗೂ ಅಲ್ಪಸಂಖ್ಯಾತ ಕಲ್ಯಾಣ ನಿಗಮದೊಂದಿಗೆ ನೇರವಾಗಿ ಸಂಪರ್ಕ ಹೊಂದಿರಬೇಕು’ ಎಂದು ಹೇಳಿದರು.
ಅಲ್ಪಸಂಖ್ಯಾತ ನಿಗಮದ ವ್ಯವಸ್ಥಾಪಕ ಅಕ್ಬರಸಾಬ ಕುರ್ತಕೋಟಿ, ಅಂಜುಮನ್ ಕಮಿಟಿ ಅಧ್ಯಕ್ಷ ಮಹಮ್ಮದ ಯೂಸುಫ್ ನಮಾಜಿ, ಮುಖಂಡರಾದ ಫಾರೂಖ್ ಹುಬ್ಬಳ್ಳಿ, ಭಾಷಾಸಾಬ ಮಲ್ಲಸಮುದ್ರ, ಕೆ.ಐ.ಶೇಖ್, ಮೌಲಾಸಾಬ ಗುಡಿಲಮನಿ, ಜುನೇದಾ ಉಮಚಗಿ, ಫಾರೂಖ್ ಮುಲ್ಲಾ, ಸಯ್ಯದ್ ಖಾಲೀದ ಕೊಪ್ಪಳ ಇದ್ದರು.