ಗದಗ:ಭಾವೈಕ್ಯದ ಸಂಕೇತವಾದ ಮೊಹರಂ ಆಚರಣೆ ಶುಕ್ರವಾರ ನಗರ ಹಾಗೂ ಜಿಲ್ಲೆಯಾದ್ಯಂತ ಶ್ರದ್ಧಾ ಭಕ್ತಿಯಿಂದ ನಡೆಯಿತು.
ಹಸನ್ -ಹುಸೇನ್ ತ್ಯಾಗ,ಬಲಿದಾನಗಳನ್ನು ಸ್ಮರಿಸಿ ನಗರದ ಇರಾನಿ ಕಾಲೊನಿ ಮುಸ್ಲಿಮರು ಶೋಕಾಚರಣೆ ಮಾಡಿದರು. ಮೆರವಣಿಗೆಯುದ್ದಕ್ಕೂ ಕಣ್ಣೀರು ಸುರಿಸಿದರು. ಯುವಕರು ಶೋಕಗೀತೆ ಹಾಡುತ್ತ, ಹರಿತವಾದ ವಸ್ತುಗಳನ್ನು ದೇಹಕ್ಕೆ ಹೊಡೆದುಕೊಂಡು ರಕ್ತ ಹರಿಸಿದರು.
ನಗರದ ಮಾಬುಸುಬಾನಿ ಕಟ್ಟೆ, ಜುಮ್ಮಾ ಮಸೀದಿ, ದಖನಿ ಗಲ್ಲಿ, ಒಕ್ಕಲಗೇರಿ ಓಣಿ, ಖಾನ್ತೋಟ, ಮುಕ್ತುಂ ಗರಡಿ, ಹಳೇ ಕಚೇರಿ, ಹನುಮನ ಗರಡಿ ಸೇರಿದಂತೆ ಹಲವೆಡೆ ಪ್ರತಿಷ್ಠಾಪಿಸಿದ್ದ ಪಾಂಜಾಗಳು ಹಾಗೂ ಡೋಲಿಗಳ ಮೆರವಣಿಗೆ ನಡೆಯಿತು.
ನಗರದ ಕಾಗದಗೇರಿ ಓಣಿಯಲ್ಲಿರುವ ಬಾವಿ ಹಾಗೂ ಮುಕ್ತುಮ್ ಬಾವಡಿಯಲ್ಲಿ ಹಲವು ತಾಬೂತ್ಗಳು ಸಮಾವೇಶಗೊಂಡವು. ಬಳಿಕ ವಿಧಿವತ್ತಾಗಿ ಪಾಂಜಾಗಳನ್ನು ಹೊಳೆಗೆ ಕಳುಹಿಸಲಾಯಿತು. ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಹಿಂದೂ–ಮುಸ್ಲಿಮರು ಒಟ್ಟಾಗಿ ಮೊಹರಂ ಆಚರಿಸಿ ಸೌಹಾರ್ದ ಮೆರೆದರು.ಯುವಕರು ಹಾಗೂ ಬಾಲಕರು ಕೈಗೆ ದಾರ ಕಟ್ಟಿಕೊಂಡು ಫಕೀರರಾಗಿ, ಅಳ್ಳೊಳ್ಳಿ ಬವ್ವಾ, ಹುಲಿ ವೇಷ ಧರಿಸಿ ಭಕ್ತಿ ಸಮರ್ಪಿಸಿದರು.