ತುಮಕೂರು: ಸಿದ್ಧಗಂಗಾ ಮಠದಿಂದ ಅಮಿತ್ ಶಾ ಅವರಿಗೆ ಶಿವಕುಮಾರ ಸ್ವಾಮೀಜಿ ಅವರ ಭಾವಚಿತ್ರವುಳ್ಳ ನೆನಪಿನ ಕಾಣಿಕೆ ನೀಡಲಾಯಿತು. ಶಾ ಅವರ ಅಂಗರಕ್ಷಕ ಪಡೆ ಸಿಬ್ಬಂದಿಯೊಬ್ಬರು ಈ ಭಾವಚಿತ್ರ ತೆಗೆದುಕೊಂಡು ಹೋದರು. ‘ಪ್ರಜಾವಾಣಿ’ಯ ಫೇಸ್ಬುಕ್ ಖಾತೆಯಲ್ಲಿ ಸೋಮವಾರ ಬೆಳಿಗ್ಗೆಯೇ ಅಪ್ಲೋಡ್ ಆದ ಈ ಚಿತ್ರ ಈಗ ಪರ ವಿರೋಧದ ಚರ್ಚೆಗೆ ನಾಂದಿ ಹಾಡಿದೆ.
ಕೆಲವರು ಇದು ಶಿವಕುಮಾರ ಸ್ವಾಮೀಜಿ ಅವರಿಗೆ ಮಾಡಿದ ಅಪಮಾನ ಎಂದರೆ, ಮತ್ತಷ್ಟು ಮಂದಿ ಯೋಧ ಭಾವಚಿತ್ರ ಹಿಡಿದುಕೊಂಡು ಹೋಗಿದ್ದರಲ್ಲಿ ತಪ್ಪಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.
‘ಬಿಜೆಪಿಗರು ಬಸವಣ್ಣ ಮತ್ತು ಶಿವಕುಮಾರ ಸ್ವಾಮಿಜೀಗೆ ರಾಜಕೀಯಕ್ಕಾಗಿ ಕಾಲು ಹಿಡೀತಾರೆ, ಗೆದ್ದರೆ ಒದೀತಾರೆ, ನಂತರ ಆರ್ಎಸ್ಎಸ್ಗೇ ಜೈ ಅಂತಾರೆ ನೋಡಿ’ ಎಂದು ಜನ್ನು ವಿ.ಜನಾರ್ದನ್ ಅವರು ಪ್ರತಿಕ್ರಿಯಿಸಿದ್ದಾರೆ.
‘ದೇಶದ ಸೈನಿಕರು ಇವರಿಗೆ ಕೂಲಿಕಾರರಾ? ಸೈನಿಕರು ಇರೋದು ದೇಶದ ರಕ್ಷಣೆಗಾಗಿ. ಆತನ ವಸ್ತುಗಳನ್ನು ಎತ್ತಿಕೊಂಡು ತಿರುಗುವುದಕ್ಕೆ ಅಲ್ಲ’ ಎಂದು ಭೀಮರಾಯ ಹೇಳಿದ್ದಾರೆ.
‘ರಾಹುಲ್ ಗಾಂಧಿ, ಸಿದ್ದರಾಮಯ್ಯ ತಮಗೆ ಕೊಟ್ಟ ಉಡುಗೊರೆಗಳನ್ನು ಅವರೇ ಹಿಡ್ಕೊಂಡು ಹೋಗುತ್ತಾರಾ?’ ಎಂದು ನಾಗೇಂದ್ರ ಪ್ರಸಾದ್ ಪ್ರಶ್ನಿಸಿದ್ದಾರೆ. ‘ಗನ್ಮ್ಯಾನ್ಗೆ ಶ್ರೀಗಳ ಫೋಟೊ ತೆಗೆದುಕೊಂಡು ಹೋಗೋ ಯೋಗ್ಯತೆ ಇಲ್ವ? ಇದೇನಾ ನೀವು ಒಬ್ಬ ದೇಶ ಕಾಯೋ ಸೈನಿಕನಿಗೆ ಕೊಡುವ ಗೌರವ?’ ಎಂದು ತಿಮ್ಮಪ್ಪ ಗೌಡ ಎಂಬುವವರು ಪ್ರತಿಕ್ರಿಯಿಸಿದ್ದಾರೆ.