ಮುಂಡರಗಿ: ಗೋವಾದಿಂದ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ವಾಹನ ಹಾಗೂ ಸುಮಾರು ₹ 2,250 ಮೌಲ್ಯದ 6.24 ಲೀಟರ್ ಮದ್ಯವನ್ನು ಅಬಕಾರಿ ಇಲಾಖೆಯ ಅಧಿಕಾರಿಗಳು ಬುಧವಾರ ತಾಲ್ಲೂಕಿನ ಸಿಂಗಟರಾಯನಕೇರಿ ತಾಂಡಾದ ಬಳಿ ವಶಪಡಿಸಿಕೊಂಡಿದ್ದಾರೆ.
ಅಬಕಾರಿ ಇಲಾಖೆಯ ಅಧಿಕಾರಿಗಳು ಖಚಿತ ಮಾಹಿತಿ ಮೇರೆಗೆ ಅಬಕಾರಿ ಉಪ ಆಯುಕ್ತ ವೈ.ಭರತೇಶ ಅವರ ಮಾರ್ಗದರ್ಶನದಲ್ಲಿ ಅಬಕಾರಿ ನಿರೀಕ್ಷಕಿ ಶೈನಾಜ್ ಬೇಗಂ ಅವರು ₹13 ಲಕ್ಷ ಮೌಲ್ಯದ ವಾಹನ ಹಾಗೂ ವಾಹನ ಚಾಲಕ ಸಿಂಗಟರಾಯನಕೇರಿ ತಾಂಡಾದ ವಿಶ್ವನಾಥ ರೂಪ್ಲೆಪ್ಪ ಚವಾಣ ಅವರನ್ನು ವಶಕ್ಕೆ ಪಡಿದಿದ್ದಾರೆ.
ಪಶ್ಚಿಮ ಶಿಕ್ಷಕರ ಮತಕ್ಷೇತ್ರದ ಚುನಾವಣೆ ಘೋಷಣೆಯಾಗಿರುವುದರಿಂದ ನೀತಿ ಸಂಹಿತೆ ಜಾರಿಯಲ್ಲಿದೆ. ಈ ಕಾರಣದಿಂದ ಅಂತರ ರಾಜ್ಯ ಮದ್ಯ ಸಾಗಾಣಿಕೆ ಪ್ರಕರಣದ ಅಡಿಯಲ್ಲಿ ವಾಹನ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದುಅಬಕಾರಿ ನಿರೀಕ್ಷಕಿ ಶೈನಾಜ್ ಬೇಗಂ ತಿಳಿಸಿದ್ದಾರೆ.
ಅಬಕಾರಿ ಇಲಾಖೆಯ ಸಿದ್ದಪ್ಪ ಹಿರೇತನದ, ವಿಶಾಲ ಮಳಗಿ, ಸವಿತಾ ಕೋಳಿವಾಡ, ಮಹದೇವ ಕುರುವಿನಶಟ್ಟಿ ದಾಳಿಯಲ್ಲಿ ಪಾಲ್ಗೊಂಡಿದ್ದರು.