ನರಗುಂದ: ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಆರ್ಯವೈಶ್ಯ ಸಮಾಜದಿಂದ ಶಿವಪಂಚಾಕ್ಷರಿ ಕೋಟಿ ಜಪ ಯಜ್ಞ ಆರಂಭವಾಯಿತು.
9 ದಿನಗಳ ಕಾಲ ನಡೆಯುವ ಈ ಜಪಯಜ್ಞದಲ್ಲಿ ಬೆಳಿಗ್ಗೆ ಎರಡು ಗಂಟೆಗಳ ಕಾಲ ಪಟ್ಟಣದ ವಿವಿಧ ಸಂಘಟನೆಗಳ ಸದಸ್ಯರು ಭಾಗವಹಿಸಿದ್ದರು. ‘ಈ ಭಾಗದ ರೈತ ಸಮುದಾಯ ಬರದಿಂದ ತತ್ತರಿಸಿದೆ. ರೈತ ನಿತ್ಯ ಮುಗಿಲಿನತ್ತ ಮುಖ ಮಾಡಿ ಮಳೆಗಾಗಿ ಎದುರು ನೋಡುತ್ತಿದ್ದಾನೆ, ಮಳೆರಾಯ ಕೃಪೆ ತೋರುತ್ತಿಲ್ಲ. ಆದ್ದರಿಂದ ಜೂನ್ 14ರಿಂದ 22ರವರೆಗೆ ನಿತ್ಯ ಬೆಳಿಗ್ಗೆ 6.30ರಿಂದ 8 ಗಂಟೆಯವರೆಗೆ ಜಪಯಜ್ಞ ನಡೆಸಲಾಗುತ್ತಿದೆ’ ಎಂದು ಇದರ ನೇತೃತ್ವ ವಹಿಸಿರುವ ಸಂತೋಷ ಆನಗುಂದಿ ಹೇಳಿದರು.
ಜಪಯಜ್ಞದಲ್ಲಿ ಆರ್ಯವೈಶ್ಯ ಸಮಾಜದ ಅಶೋಕ ಗುಜಮಾಗಡಿ. ಗೋವಿಂದ ಇಂಗಳಳ್ಳಿ, ಶಕುಂತಲಾ ಮಂಗನಹಳ್ಳಿ, ವಾಸವಿ ಯುವತಿ ಸಂಘದ ಅಧ್ಯಕ್ಷೆ ರಶ್ಮಿ ಆನೇಗುಂದಿ, ಕಾಶಿನಾಥ ಪತ್ತೇಪುರ, ಮಂಜಣ್ಣ ಬೆಳಗಾವಿ, ವೆಂಕಣ್ಣ ಗುಜಮಾಗಡಿ, ಗೋಪಾಲಕೃಷ್ಣ ಆನೇಗುಂದಿ, ಸುರೇಶ ಪಟ್ಟದಕಲ್ ಭಾಗವಹಿಸಿದ್ದರು.