ಬೆಂಗಳೂರು: ಬಸವೇಶ್ವರ ನಗರ ಸಮೀಪದ ಕಮಲಾ ನಗರದಲ್ಲಿ ಬಿಎಚ್ಇಎಲ್ ನಿವೃತ್ತ ಉದ್ಯೋಗಿ ನಂಜುಂಡಯ್ಯ (65) ಎಂಬುವರನ್ನು ಕತ್ತು ಹಿಸುಕಿ ಕೊಲೆ ಮಾಡಲಾಗಿದೆ.
ಮನೆಯಲ್ಲಿ ಒಬ್ಬಂಟಿಯಾಗಿ ವಾಸವಿದ್ದವರನ್ನು ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ. ಈ ಸಂಬಂಧ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರ ವಿಶೇಷ ತಂಡ ರಚಿಸಲಾಗಿದೆ.
‘ನಂಜುಂಡಯ್ಯ ಅವರ ಮಗ ಪ್ರಮೋದ್, ಮೂರನೇ ಮಹಡಿಯಲ್ಲಿ ನೆಲೆಸಿದ್ದಾರೆ. ಮೊದಲ ಮಹಡಿಯ ಮನೆಯನ್ನು ಬಾಡಿಗೆಗೆ ಕೊಡಲಾಗಿದೆ’ ಎಂದು ಪೊಲೀಸರು ತಿಳಿಸಿದರು.
‘ಮೃತರ ಸಹೋದರನ ಮಗ ನಂಜುಂಡಯ್ಯ ಅವರ ಮೊಬೈಲ್ಗೆ ಭಾನುವಾರ ಕರೆ ಮಾಡಿದ್ದ. ಕರೆ ಸ್ವೀಕರಿಸದ್ದರಿಂದ ಮನೆಗೆ ಸಂಜೆ ಹೋಗಿದ್ದ. ನಂಜುಂಡಯ್ಯ ಮೃತಪಟ್ಟ ಸ್ಥಿತಿಯಲ್ಲಿ ಬಿದ್ದಿದ್ದನ್ನು ಕಂಡಿದ್ದ. ನಂತರ, ಆತನೇ ಠಾಣೆಗೆ ಕರೆ ಮಾಡಿ ವಿಷಯ ತಿಳಿಸಿದ್ದ’ ಎಂದು ಹೇಳಿದರು.
‘ಮೃತರ ಕುತ್ತಿಗೆ ಭಾಗದಲ್ಲಿ ಗುರುತುಗಳಿವೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಅದರ ವರದಿಗಾಗಿ ಕಾಯುತ್ತಿದ್ದೇವೆ’ ಎಂದರು.
ಸಂಬಂಧಿಕರ ವಿಚಾರಣೆ: ಮೃತರ ಸಂಬಂಧಿ ಮಂಜುನಾಥ್ ಅವರು ನೀಡಿರುವ ದೂರಿನನ್ವಯ ತನಿಖೆ ಕೈಗೊಂಡಿರುವ ಪೊಲೀಸರು, ಸಂಬಂಧಿಕರನ್ನು ವಿಚಾರಣೆಗೆ ಒಳಪಡಿಸುತ್ತಿದ್ದಾರೆ.
‘ಘಟನೆ ನಡೆದಿರುವ ಮನೆಯಲ್ಲಿ ಯಾವುದೇ ವಸ್ತುಗಳು ಕಳವಾಗಿಲ್ಲ. ಕೌಟುಂಬಿಕ ಕಾರಣದಿಂದ ಪರಿಚಯಸ್ಥರೇ ಈ ಕೊಲೆ ಮಾಡಿರುವ ಅನುಮಾನವಿದೆ. ಅದೇ ಆಯಾಮದಲ್ಲಿ ಮಾಹಿತಿ ಕಲೆಹಾಕುತ್ತಿದ್ದೇವೆ’ ಎಂದು ಪೊಲೀಸರು ತಿಳಿಸಿದರು.