ಗದಗ: ‘ಗ್ರಾಮಗಳ ಉದ್ಧಾರದಿಂದ ಮಾತ್ರ ದೇಶದ ಉದ್ಧಾರ ಎಂಬ ಗಾಂಧಿ ತತ್ವ ಅನುಷ್ಠಾನದ ಜತೆಗೆ ವಿಶ್ವವಿದ್ಯಾಲಯದ ಧ್ಯೇಯ ಮತ್ತು ಉದ್ದೇಶಗಳನ್ನು ಈಡೇರಿಸುವುದೇ ನಮ್ಮ ಸಂಕಲ್ಪ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ವಿಷ್ಣುಕಾಂತ ಎಸ್.ಚಟಪಲ್ಲಿ ಹೇಳಿದರು.
ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ನಡೆದ 72ನೇ ಗಣರಾಜ್ಯೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ಸಾಬರಮತಿ ಆಶ್ರಮದಲ್ಲಿ ವಿಶ್ವವಿದ್ಯಾಲಯದ ವತಿಯಿಂದ ಅನೇಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಪ್ರತಿ ಶುಕ್ರವಾರ ಖಾದಿ ದಿನ ಆಚರಿಸುವ ಮೂಲಕ, ಖಾದಿಯ ಮಹತ್ವ ಸಾರಲಾಗುತ್ತಿದೆ’ ಎಂದು ಹೇಳಿದರು.
ಕೆಎಸ್ಎಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಬಿ.ಎಫ್.ದಂಡಿನ್ ಹಾಗೂ ಕವಿ ರಾಮಣ್ಣ ದೊಡ್ಡಪ್ಪ ಬ್ಯಾಟಿ ಧ್ವಜಾರೋಹಣ ನೆರವೇರಿಸಿದರು.
‘ರಾಷ್ಟ್ರ ನಿರ್ಮಾಣದಲ್ಲಿ ಹಲವು ನಾಯಕರು ತಮ್ಮ ಪ್ರಾಣ ಬಲಿದಾನ ಮಾಡಿದ್ದಾರೆ. ಇಂದಿನ ಪೀಳಿಗೆ ಅವರ ತತ್ವಾದರ್ಶಗಳನ್ನು ಅಳವಡಿಸಿಕೊಳ್ಳುವ ಮೂಲಕ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು’ ಎಂದು ಡಾ. ಬಿ.ಎಫ್.ದಂಡಿನ್ ಹೇಳಿದರು.
ಕವಿ ರಾಮಣ್ಣ ದೊಡ್ಡಪ್ಪ ಬ್ಯಾಟಿ ಅವರು ಸಂವಿಧಾನದ ಪ್ರಾಮುಖ್ಯತೆ ಹಾಗೂ ಅವರು ರಚಿಸಿದ ಡಾ. ಬಿ.ಆರ್.ಅಂಬೇಡ್ಕರ್ ಕೃತಿಯ ಬಗ್ಗೆ ಹೇಳಿದರು.
ಗಣರಾಜ್ಯೋತ್ಸವ ಹಾಗೂ ಮತದಾರರ ಜಾಗೃತಿ ದಿನದ ಅಂಗವಾಗಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಬಸವರಾಜ ಎಲ್.ಲಕ್ಕಣ್ಣವರ ಅತಿಥಿಗಳನ್ನು ಸ್ವಾಗತಿಸಿದರು. ಉಪನ್ಯಾಸಕ ಡಾ. ಸಂಗನಗೌಡ ಪಾಟೀಲ ಅತಿಥಿಗಳನ್ನು ಪರಿಚಯಿಸಿದರು. ಡಾ. ವೀರೇಶ್ಕುಮಾರ ವಂದಿಸಿದರು. ಪ್ರಶಾಂತ ಮೇರವಾಡೆ ನಿರೂಪಿಸಿದರು.