ಕಾರವಾರ: ರಾಜ್ಯದಲ್ಲಿ ಗೂಂಡಾ ಸರ್ಕಾರವಿದೆ. ಎಲ್ಲೆಡೆ ಸಜ್ಜನರ ರಕ್ಷಣೆಗೆ, ದುರ್ಜನರ ಶಿಕ್ಷೆಗೆ ಪೊಲೀಸರಿದ್ದಾರೆ. ಆದರೆ, ಕರ್ನಾಟಕದಲ್ಲಿ ಪೊಲೀಸರಿಗೇ ರಕ್ಷಣೆಯಿಲ್ಲ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಪ್ರಕಾಶ್ ಜಾವ್ಡೇಕರ್ ಟೀಕಿಸಿದರು.
ಇಲ್ಲಿನ ಮಾಲಾದೇವಿ ದೇವಸ್ಥಾನ ಮೈದಾನದಿಂದ ಬಿಜೆಪಿ ಹಮ್ಮಿಕೊಂಡಿರುವ ‘ಮಂಗಳೂರು ಚಲೋ’ ಜನ ಸುರಕ್ಷಾ ಯಾತ್ರೆಗೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.
ಈ ಬಾರಿಯ ವಿಧಾನಸಭಾ ಚುನಾವಣೆ ಪಕ್ಷಗಳ ನಡುವಿನ ಪೈಪೋಟಿಯಲ್ಲ. ಇದು ಗೂಂಡಾ ಸಂಸ್ಕೃತಿ ಮತ್ತು ಉತ್ತಮ ಆಡಳಿತಗಳ ನಡುವಿನ ಸ್ಪರ್ಧೆಯಾಗಿದೆ. ಎಲ್ಲರನ್ನು ಒಳಗೊಂಡು ಮುಂದುವರಿಯುವುದು ಬಿಜೆಪಿಯ ಸಂಸ್ಕೃತಿ. ಕಾಂಗ್ರೆಸ್ನದ್ದು ಒಡೆದು ಆಳುವ ನೀತಿ ಎಂದು ಟೀಕಿಸಿದರು.
ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಮಾತನಾಡಿ, 'ರಾಜ್ಯದಲ್ಲಿ ನಾಲ್ಕು ವರ್ಷಗಳಲ್ಲಿ ಹಿಂದೆಂದೂ ಆಗದಷ್ಟು ಕೊಲೆ, ಅತ್ಯಾಚಾರಗಳು, ಹಲ್ಲೆ ಪ್ರಕರಣಗಳಾಗಿವೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ಹೇಳಿದರು.
ಮಾತೆತ್ತಿದರೆ ನಮ್ಮದು ಸಾಧನಾಮಯಿ ಸರ್ಕಾರ ಎಂದು ಹೇಳುವ ಸಿದ್ದರಾಮಯ್ಯ, ಇದಕ್ಕೆಲ್ಲ ಉತ್ತರಿಸಬೇಕು. ಕೊನೆಯ ಒಂದು ತಿಂಗಳು ಕೂಡ ಮುಖ್ಯಮಂತ್ರಿ ಕುರ್ಚಿಯಲ್ಲಿ ಕೂರಲು ಅನರ್ಹರು. ಅಧಿಕಾರ ತ್ಯಜಿಸಬೇಕು.ಇದೇ ಆಗ್ರಹದೊಂದಿಗೆ ಮಂಗಳೂರಿಗೆ ಯಾತ್ರೆ ಸಾಗಲಿದೆ. ಈ ಐತಿಹಾಸಿಕ ಭಂಡ ಸರ್ಕಾರ ತೊಲಗಬೇಕು ಎಂದು ಆಗ್ರಹಿಸಿದರು.
ಪಕ್ಷದ ಸ್ಥಳೀಯ ಮುಖಂಡರಾದ ರೂಪಾಲಿ ನಾಯ್ಕ, ಗಣಪತಿ ಉಳ್ವೇಕರ್, ರಾಮು ರಾಯ್ಕರ್, ನಾಗರಾಜ ನಾಯ್ಕ, ನೂರಾರು ಕಾರ್ಯಕರ್ತರು ಇದ್ದರು.