ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಸರ ಸಮತೋಲನಕ್ಕೆ ಒತ್ತು ನೀಡಿ: ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ಚವ್ಹಾಣ್‌

ವನ್ಯಜೀವಿ ಸಪ್ತಾಹ ಸಮಾರೋಪ: ಸಂರಕ್ಷಿತ ಪ್ರದೇಶಗಳ ಅಂಚೆ ಚೀಟಿ ಬಿಡುಗಡೆ
Last Updated 9 ಅಕ್ಟೋಬರ್ 2020, 6:17 IST
ಅಕ್ಷರ ಗಾತ್ರ

ಗದಗ: ‘ಜಿಲ್ಲೆಯಲ್ಲಿರುವ ಪ್ರಾಕೃತಿಕ ಸಂಪತ್ತನ್ನು ಸಂರಕ್ಷಿಸಿ, ಜೀವ ವೈವಿಧ್ಯ ಕಾಪಾಡಬೇಕು’ ಎಂದು ಧಾರವಾಡ ವಲಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ಚವ್ಹಾಣ್‌ ಹೇಳಿದರು.

ಗದಗ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಗುರುವಾರ ನಡೆದ 66ನೇ ವನ್ಯಜೀವಿ ಸಪ್ತಾಹ ಸಮಾರೋಪ ಸಮಾರಂಭದಲ್ಲಿ ಅವರು ಅರಣ್ಯ ಮತ್ತು ಅಂಚೆ ಇಲಾಖೆಯ ಸಹಯೋಗದಲ್ಲಿ ಹೊರತಂದ ಗದುಗಿನ ಸಂರಕ್ಷಿತ ಪ್ರದೇಶಗಳ ವಿಶೇಷ ಲಕೋಟೆ ಮತ್ತು ಅಂಚೆಚೀಟಿ ಬಿಡುಗಡೆ ಮಾಡಿ ಮಾತನಾಡಿದರು.

‘ಪ್ರಾಣಿ, ಪಕ್ಷಿಗಳಷ್ಟೇ ವನ್ಯಸಂಪತ್ತಲ್ಲ. ಪ್ರತಿಯೊಂದು ಸಣ್ಣಪುಟ್ಟ ಸಸ್ಯ ಪ್ರಭೇದಗಳು ಕೂಡ ಅರಣ್ಯ ಸಂಪತ್ತಾಗಿದ್ದು, ಅವುಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರದ್ದು. ಈ ಬಾರಿಯ ವನ್ಯಜೀವಿ ಸಪ್ತಾಹದ ಘೋಷವಾಕ್ಯ ‘ಭವಿಷ್ಯಕ್ಕಾಗಿ ರಣಹದ್ದುಗಳು’. ರಣಹದ್ದುಗಳ ಸಂತತಿ ಅಳಿವಿನಂಚಿಗೆ ಬರಲು ಮಾನವನೇ ಪರೋಕ್ಷವಾಗಿ ಕಾರಣನಾಗಿದ್ದಾನೆ’ ಎಂದು ಹೇಳಿದರು.

ಕಪ್ಪತ್ತಗುಡ್ಡ ಹಾಗೂ ಮಾಗಡಿ ಕೆರೆ ಕುರಿತ ಅಂಚೆಚೀಟಿಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ಜಿಲ್ಲಾಧಿಕಾರಿ ಎಂ.ಸುಂದರೇಶ ಬಾಬು, ‘ಪ್ರಸ್ತುತ ದಿನಗಳಲ್ಲಿ ಕಾಡಿನ ಪ್ರಮಾಣ ಕಡಿಮೆಯಾಗುತ್ತಿದೆ. ಕಾಡು ಮತ್ತು ವನ್ಯಜೀವಿಗಳನ್ನು ರಕ್ಷಿಸುವ ಮೂಲಕ ಪರಿಸರದ ಸಮತೋಲನ ಕಾಪಾಡಬೇಕು. ಹೆಚ್ಚೆಚ್ಚು ಗಿಡ ಮರಗಳನ್ನು ನೆಟ್ಟು ಮುಂದಿನ ಪೀಳಿಗೆಗೆ ಪರಿಸರ ಸಂಪತ್ತನ್ನು ಕೊಡುಗೆಯಾಗಿ ನೀಡಬೇಕು’ ಎಂದು ಹೇಳಿದರು.

‘ವನ್ಯಜೀವಿ ಸಪ್ತಾಹದ ಉದ್ದೇಶಗಳು ಈಡೇರಲು ಜಿಲ್ಲೆಯ ಕಪ್ಪತ್ತಗುಡ್ಡ ಹಾಗೂ ಮಾಗಡಿ ಕೆರೆಯ ಬಗ್ಗೆ ಜನರಲ್ಲಿ ಹೆಚ್ಚು ಜಾಗೃತಿ ಮೂಡಿಸಬೇಕು. ಪರಿಸರ ಸಂರಕ್ಷಣೆಗೆ ಅರಣ್ಯ ಇಲಾಖೆಯೊಂದಿಗೆ ಪ್ರತಿಯೊಬ್ಬ ನಾಗರಿಕರು ಕೈ ಜೋಡಿಸಬೇಕು’ ಎಂದು ಹೇಳಿದರು.

ಗದಗ ಅಂಚೆ ವಿಭಾಗದ ಅಧೀಕ್ಷಕ ಎಚ್.ಬಿ.ಹಸಬಿ ಮಾತನಾಡಿ, ‘ವಿಶೇಷ ಲಕೋಟೆ ಮತ್ತು ಅಂಚೆ ಚೀಟಿಗಳನ್ನು ಹೊರತರಲು ಡಿಎಫ್‌ಒ ಎ.ವಿ.ಸೂರ್ಯಸೇನ್‌ ಅವರ ವಿಶೇಷ ಕಾಳಜಿಯೇ ಕಾರಣ. ಕಪ್ಪತ್ತಗುಡ್ಡ ಮತ್ತು ಮಾಗಡಿ ಕೆರೆಯ ವಿಶೇಷತೆಗಳನ್ನು ಈ ಅಂಚೆಚೀಟಿಗಳಲ್ಲಿ ಸಮಗ್ರವಾಗಿ ಕಣ್ತುಂಬಿಕೊಳ್ಳಬಹುದು. ಗದಗ ಜಿಲ್ಲೆಯ ಕೀರ್ತಿ ವಿಶ್ವದ ಉದ್ದಗಲಕ್ಕೂ ಈ ಮೂಲಕ ಹರಡಲಿದೆ’ ಎಂದು ಅವರು ಹೇಳಿದರು.

ವನ್ಯಜೀವಿ ಪರಿಪಾಲಕ ಸಿ.ಎಸ್.ಅರಸನಾಳ ಮಾತನಾಡಿ, ‘ಜೀವ ವೈವಿಧ್ಯದ ಆಗರವಾದ ಉತ್ತರ ಕನಾಟಕದ ಸಹ್ಯಾದ್ರಿ ಎಂದೇ ಖ್ಯಾತಿ ಹೊಂದಿರುವ ಕಪ್ಪತಗುಡ್ಡವನ್ನು ಸಂರಕ್ಷಿಸಲು ಎಲ್ಲರೂ ಕೈಜೋಡಿಸಬೇಕು’ ಎಂದು ಹೇಳಿದರು.‌

ಉಪ ಅರಣ್ಯ ಸಂರಕ್ಷಣಾಧಿಕಾರಿ ಎ.ವಿ.ಸೂರ್ಯಸೇನ್ ಸೇರಿದಂತೆ ಅರಣ್ಯ ಪರಿಪಾಲಕರು ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT