ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಸೇವೆಯೇ ದೇವರ ಪೂಜೆ; ಸಿದ್ಧರಾಮ ಶ್ರೀ

ತೋಂಟದಾರ್ಯ ಮಠದಲ್ಲಿ ಶಿವಾನುಭವ ಕಾರ್ಯಕ್ರಮ; ಡಾ.ಬಿಂದಣ್ಣ ಪುಸ್ತಕ ಬಿಡುಗಡೆ
Last Updated 27 ಡಿಸೆಂಬರ್ 2018, 11:21 IST
ಅಕ್ಷರ ಗಾತ್ರ

ಗದಗ: ‘ಜಾತಿ, ಮತ, ವರ್ಗ-ವರ್ಣಗಳ ಭೇದವಿಲ್ಲದೇ ನಿಸ್ವಾರ್ಥ ಮನೋಭಾವನೆಯಿಂದ ಮಾಡುವ ಜನಸೇವೆಯು ದೇವರ ಪೂಜೆಗಿಂತ ಶ್ರೇಷ್ಠವಾಗಿದೆ’ಎಂದು ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ ಹೇಳಿದರು.

ಮಠದಲ್ಲಿ ನಡೆದ ಶಿವಾನುಭವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಬಸವಾದಿ ಶರಣರು ಕಾಯಕ ನಿಷ್ಠೆಗೆ ಪ್ರಾಮುಖ್ಯತೆ ನೀಡಿದರು. ಅವರ ಹಾದಿಯನ್ನೇ ಅನುಸರಿಸಿದ ಡಾ.ಬಿ.ಆರ್ ಇನಾಮದಾರ ಅವರು ವೈದ್ಯಕೀಯ ಕ್ಷೇತ್ರದಲ್ಲಿ ಮಾಡಿದ ಸೇವೆಯು ಇತರರಿಗೆ ಅನುಕರಣೀಯವಾಗಿದೆ’ಎಂದು ಅವರು ಅಭಿಪ್ರಾಯಪಟ್ಟರು.

‘ಭಾರತದ ಪುರಾತನ ಚಿಕಿತ್ಸಾ ಪದ್ಧತಿ ಆಯುರ್ವೇದವನ್ನು ಪರಿಣಾಮಕಾರಿಯಾಗಿ ಬಳಸಿ, ನೂರಾರು ಜನರ ಕಾಯಿಲೆಗಳನ್ನು ಗುಣಪಡಿಸಿದ ಡಾ.ಇನಾಮದಾರ ಅವರ ವೈದ್ಯಕೀಯ ಕ್ಷೇತ್ರದ ಸಾಧನೆ ಶ್ಲಾಘನೀಯ. ಪುಸ್ತಕಗಳು ಜಗತ್ತನ್ನು ಆಳುತ್ತವೆ ಹಾಗೂ ಮುಂದಿನ ಪೀಳಿಗೆಗೆ ದಾರಿದೀಪವಾಗಿರುತ್ತವೆ, ಇಂಥ ಮಹಾನ್ ಚೇತನಗಳ ಸತ್ಕಾರ್ಯಗಳು ಶಾಶ್ವತವಾಗಿ ಉಳಿಯುವಲ್ಲಿ ಗ್ರಂಥ ದಾಸೋಹಿಗಳು ಹಾಗೂ ಲೇಖಕರು ಪಟ್ಟ ಶ್ರಮ ಸಾರ್ಥಕವಾಗಿದೆ’ ಎಂದರು.

ಗ್ರಂಥ ಸಂಪಾದಕ ಅಂದಾನೆಪ್ಪ ವಿಭೂತಿ ಮಾತನಾಡಿ ‘ದಿನದ 24 ಗಂಟೆಯೂ ಬಿಡುವಿಲ್ಲದೇ ಕಾಯಕದಲ್ಲಿ ತೊಡಗಿರುತ್ತಿದ್ದ ಡಾ.ಇನಾಮರಾದ ಅವರು ದಣಿವರಿಯದ ಕಾಯಕಜೀವಿ. ವೈದ್ಯಕೀಯ ಕ್ಷೇತ್ರ ಮಾತ್ರವಲ್ಲದೇ, ಕೃಷಿ ಕಾಯಕದಲ್ಲೂ ಅವರು ಖುಷಿ ಕಂಡವರು. ತಾವೊಬ್ಬರೇ ಬೆಳೆಯದೇ ತಮ್ಮ ಜತೆಗಿನ ಇತರರನ್ನೂ ಪ್ರೋತ್ಸಾಹಿಸಿ ಬೆಳೆಸಿದರು. 91ರ ಇಳಿವಯಸ್ಸಿನಲ್ಲೂ ಯುವಕರನ್ನು ನಾಚಿಸುವಂತೆ ಕಾರ್ಯಪ್ರವೃತ್ತರಾಗಿರುವುದು ಪವಾಡವೇ ಸರಿ. ಗ್ರಂಥ ದಾಸೋಹಿಗಳಾದ ಡಾ.ಅನಂತ ಶಿವಪೂರ ದಂಪತಿ ಬದ್ಧತೆಯಿಂದ, ಆಸಕ್ತಿಯಿಂದ ತಮ್ಮನ್ನು ಈ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ’ ಎಂದರು.

ಮಾಜಿ ಶಾಸಕ ಡಿ.ಆರ್ ಪಾಟೀಲ ಅವರು ಗ್ರಂಥ ಬಿಡುಗಡೆ ಮಾಡಿದರು.‘ಯಾವ ವ್ಯಕ್ತಿ ನಿಸ್ವಾರ್ಥ ಸೇವೆ ಮಾಡುವನೋ ಅವನು ತನಗರಿವಿಲ್ಲದಂತೆ ಅಪಾರ ಗೌರವ, ಕೀರ್ತಿಯನ್ನು ಗಳಿಸುವನು ಎನ್ನುವುದಕ್ಕೆ ಡಾ.ಇನಾಮದಾರ ಅವರು ಸಾಕ್ಷಿ. ಅವರೊಂದಿಗಿನ ಒಡನಾಟ ಅವಿಸ್ಮರಣೀಯ. ನನ್ನ ರಾಜಕೀಯ ಜೀವನದ ಮಹತ್ವದ ಘಟ್ಟಗಳಲ್ಲೂ ಅವರ ಪಾತ್ರವಿದೆ. ಅಸಂಖ್ಯಾತ ಜನರನ್ನು ರೋಗಗಳಿಂದ ವಿಮುಕ್ತಗೊಳಿಸಿದ ಅವರ ಕೈಗುಣವೇ ಕಲ್ಪವೃಕ್ಷ’ ಎಂದರು.

ಡಾ.ಬಿ.ಆರ್ ಇಮಾನದಾರ ಅವರನ್ನು ಸನ್ಮಾನಿಸಲಾಯಿತು. ನಂತರ ಮಾತನಾಡಿದ ಅವರು,‘ಬದುಕಿನುದ್ದಕ್ಕೂ ತೋಂಟದ ಡಾ.ಸಿದ್ಧಲಿಂಗ ಶ್ರೀಗಳ ಕೃಪಾಶೀರ್ವಾದ ಮಹತ್ವದ ಪಾತ್ರವಹಿಸಿದೆ. ನಮ್ಮೂರಿನ ಜನರು ನನ್ನ ಬಗ್ಗೆ ಹೊಂದಿರುವ ಅಪಾರ ಪ್ರೀತಿ-ಆದರಗಳಿಗೆ ನಾನು ಆಭಾರಿ. ಮಾನವನು ಇನ್ನೊಬ್ಬರ ಸೇವೆ ಮಾಡಬೇಕು ಅಂದಾಗ ಮಾತ್ರ ಜೀವನ ಸಾರ್ಥಕವೆನಿಸುವುದು’ ಎಂದರು.

‘ನಾಡಿನಲ್ಲೇ ಶ್ರೇಷ್ಠ ಪುಸ್ತಕ ಪರಂಪರೆಯನ್ನು ಕಟ್ಟಿ ಬೆಳೆಸಿದ ಡಾ.ತೋಂಟದ ಸಿದ್ಧಲಿಂಗ ಶ್ರೀಗಳು ಗ್ರಂಥದಾಸೋಹದಲ್ಲಿ ದಾಖಲೆ ನಿರ್ಮಿಸಿದ್ದಾರೆ. ಅದೇ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುತ್ತಿರುವ ಡಾ.ತೋಂಟದ ಸಿದ್ಧರಾಮ ಸ್ವಾಮಿಗಳು ಅವರದೇ ಪ್ರತಿರೂಪ ಆಗಿದ್ದಾರೆ. ಡಾ.ಇನಾಮದಾರ ಅವರನ್ನು ಗುರುತಿಸಿ ಅವರ ಗ್ರಂಥ ಬಿಡುಗಡೆಗೊಳಿಸಿದ್ದು ಶ್ಲಾಘನೀಯ ಕಾರ್ಯ’ ಎಂದು ಶಾಸಕ ಎಚ್.ಕೆ ಪಾಟೀಲ ಮೆಚ್ಚುಗೆ ವ್ಯಕ್ತಪಡಿಸಿದರು.

ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಶೇಖಣ್ಣ ಕವಳಿಕಾಯಿ ಸ್ವಾಗತಿಸಿದರು. ಸಿಂಧು ಶಾವಿ ಧರ್ಮಗ್ರಂಥ ಪಠಣ ಮಾಡಿದರು, ರಾಧಾ ಶಾವಿ ವಚನ ಚಿಂತನ ನೆರವೇರಿಸಿದರು. ಡಾ.ಪ್ರಮೋದ ಇನಾಮದಾರ ಹಾಗೂ ಬಿ.ಆರ್ ಇನಾಮದಾರ ಅಭಿಮಾನಿ ಬಳಗ, ಸೊರಟೂರು ಭಕ್ತಿ ಸೇವೆ ವಹಿಸಿಕೊಂಡಿದ್ದರು. ಜಿಲ್ಲಾ ಪಂಚಾಯ್ತಿ ಸದಸ್ಯ ವಾಸಣ್ಣ ಕುರಡಗಿ, ವಿವೇಕಾನಂದಗೌಡ ಪಾಟೀಲ, ಜಿ.ಪಿ ಕಟ್ಟಿಮನಿ, ಶಿವನಗೌಡ ಗೌಡರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT