ಗಜೇಂದ್ರಗಡ: ಮಧುರ ಕಂಠದ ಮೂಲಕ ಸಂಗೀತ ಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಎಸ್.ಪಿ.ಬಾಲಸುಬ್ರಮಣ್ಯಂ ಅವರನ್ನು ಕಳೆದುಕೊಂಡಿರುವುದು ಸಂಗೀತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಐ.ಎ.ರೇವಡಿ ಹೇಳಿದರು.
ಇಲ್ಲಿನ ಮೈಸೂರ ಮಠದಲ್ಲಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಏರ್ಪಡಿಸಿದ್ದ ಎಸ್.ಪಿ.ಬಾಲಸುಬ್ರಮಣ್ಯಂ ಅವರಿಗೆ ನುಡಿನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಎಸ್.ಪಿ.ಬಿ ಅವರಿಗೆ ಮೌನಾಚರಣೆ ಮಾಡಲಾಯಿತು.
ಎಸ್.ಕೆ.ಕವಡಿಮಟ್ಟಿ, ಹೆಚ್.ಆರ್.ಭಜಂತ್ರಿ, ಕೆ.ಜಿ.ಸಂಗಟಿ, ಶಂಕರ ಕಲ್ಲಿಗನೂರ, ಎಂ.ಎಸ್.ಮಕಾನದಾರ, ಎಸ್.ಎಸ್.ನರೇಗಲ್, ಬಿ.ವಿ.ಮುನವಳ್ಳಿ ಇದ್ದರು.
ಬೀದಿ ಬದಿ ವ್ಯಾಪಾರಸ್ಥರಿಂದ ಶ್ರದ್ಧಾಂಜಲಿ: ಇಲ್ಲಿನ ಕಾಲಕಾಲೇಶ್ವರ ವೃತ್ತದಲ್ಲಿ ಬೀದಿ ಬದಿ ವ್ಯಾಪಾರಸ್ಥರ ಸಂಘಟನೆ ಸದಸ್ಯರು ಗಾನಕೋಗಿಲೆ ಎಸ್.ಪಿ.ಬಾಲಸುಬ್ರಮಣ್ಯಂ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು. ಸಂಘದ ಅಧ್ಯಕ್ಷ ಬಾಷೆಸಾಬ ಕರ್ನಾಚಿ, ರಾಜು ಮಾಂಡ್ರೆ, ಬಾಬು ಗೋಡೆಕಾರ, ಹಲ್ಲಪ್ಪ ತಳವಾರ, ಬಸು ಚಿನ್ನೂರ ಇದ್ದರು. ಶಿರಹಟ್ಟಿ: ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದಿಂದ ನುಡಿನಮನ ಸಲ್ಲಿಸಲಾಯಿತು.
16 ಭಾಷೆಗಳಲ್ಲಿ 54 ವರ್ಷಗಳ ಕಾಲ 40 ಸಾವಿರಕ್ಕಿಂತ ಹೆಚ್ಚು ಹಾಡುಗಳನ್ನು ಹಾಡಿದ ಗಾನ ಗಾರುಡಿಗ, ಮಧುರ ಗೀತೆಗಳ ಸ್ವರ ಸಾಮ್ರಾಟ್ ಎಂದು ಬಣ್ಣಿಸಿದರು.
ತಾಲ್ಲಕು ಘಟಕದ ಅಧ್ಯಕ್ಷ ಎಂ.ಕೆ.ಲಮಾಣಿ ಮಾತನಾಡಿ, ಎದೆ ತುಂಬಿ ಹಾಡಿದ ಹಾಡುಗಳ ಮೂಲಕ ಪ್ರತಿಯೊಬ್ಬರ ಮನದಲ್ಲಿ ಅವರ ಧ್ವನಿ ಜೀವಂತವಾಗಿರುತ್ತದೆ. ಎಸ್.ಪಿ.ಬಿ ನಿಧನದಿಂದ ಭಾರತೀಯ ಸಂಗೀತ ಲೋಕಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ಹೇಳಿದರು.
ಕೆ.ಎ.ಬಳಿಗಾರ, ಬಸವರಾಜ ಕಳಸಾಪುರ, ಎಂ.ಜಿ. ಮಾಂಡ್ರೆ, ಎಂ.ಎ. ಮಕಾನದಾರ, ಹನುಮಂತಪ್ಪ ವಡ್ಡರ ಹಾಗೂ ತಾಲ್ಲೂಕು ಕಸಾಪ ಘಟಕದ ಪದಾಧಿಕಾರಿಗಳು ಹಾಜರಿದ್ದರು.