ನರೇಗಲ್: ಇಲ್ಲಿಗೆ ಸಮೀಪದ ಜಕ್ಕಲಿ ಗ್ರಾಮದ ಶಿಕ್ಷಕರೊಬ್ಬರು ಕೊರೊನಾ ಆತಂಕದಿಂದ ಸೋಮವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೃತ ಶಿಕ್ಷಕ ಮಹಾಂತೇಶ ಪ್ರಭುದೇವ ಕುದರಿ (33). ಇವರು ಗದಗ ತಾಲ್ಲೂಕಿನ ಕುರ್ತಕೋಟಿ ಸರ್ಕಾರಿ ಶಾಲೆಯಲ್ಲಿ ಸಹ ಶಿಕ್ಷಕರಾಗಿದ್ದರು.
ಮಹಾಂತೇಶ ಅವರಿಗೆ ವಾರದ ಹಿಂದೆ ಕೆಮ್ಮು, ನೆಗಡಿ, ಜ್ವರ ಕಾಣಿಸಿಕೊಂಡಿತ್ತು. ಮೇ 19ರಂದು ಅವರ ಕೋವಿಡ್ ಪರೀಕ್ಷಾ ವರದಿ ಪಾಸಿಟಿವ್ ಬಂದಿತ್ತು. ಮೇ 23ರವರೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಹಿಂತಿರುಗಿದ್ದರು.
‘ಭಾನುವಾರ ರಾತ್ರಿ ಊಟ ಮಾಡಿ ಮನೆಯ ಮಹಡಿಯ ಮೇಲೆ ಒಬ್ಬನೇ ಮಲಗಿದ್ದ. ಕೋವಿಡ್ ದೃಢಪಟ್ಟಿರುವ ವಿಷಯವನ್ನು ಮನಸ್ಸಿಗೆ ತೆಗೆದುಕೊಂಡಿದ್ದ. ಇದರಿಂದ ಮನನೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ’ ಎಂದು ಕುಟುಂಬದವರು ದೂರಿನಲ್ಲಿ ತಿಳಿಸಿದ್ದಾರೆ.
‘ನನ್ನ ಸಾವಿಗೆ ನಾನೇ ಕಾರಣ’ ಎಂಬ ಡೆತ್ ನೋಟ್ ಮೃತ ಶಿಕ್ಷಕನ ಜೇಬಿನಲ್ಲಿ ಸಿಕ್ಕಿದೆ. ನರೇಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.