ಲಕ್ಷ್ಮೇಶ್ವರ: ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಕೆಲ ಗ್ರಾಮಗಳಲ್ಲಿ ಎತ್ತುಗಳಿಗೆ ಚಪ್ಪೆಬಾವು ರೋಗ ಕಾಣಿಸಿಕೊಂಡಿದ್ದು, ರೈತರಲ್ಲಿ ಆತಂಕ ಮೂಡಿದೆ.
ಇದ್ದಕ್ಕಿದ್ದಂತೆ ಎತ್ತುಗಳಿಗೆ ಚಪ್ಪೆಬಾವು ಬಂದು ಅವು ನಡೆಯಲೂ ಸಹ ಆಗದ ಸ್ಥಿತಿ ತಲೆದೋರಿದೆ. ಕೆಲ ಎತ್ತುಗಳಿಗೆ ಎರಡೂ ಭಾಗದಲ್ಲಿ ವಾಗು ಕಾಣಿಸಿಕೊಂಡರೆ ಮತ್ತೆ ಕೆಲವುಗಳಿಗೆ ಒಂದೇ ಕಡೆ ಬಾವು ಕಾಣಿಸಿಕೊಂಡಿದೆ. ಇನ್ನು ಕೆಲ ಎತ್ತುಗಳ ಮುಂಗಾಲುಗಳಿಗೂ ಬಾವು ಬರುತ್ತಿದೆ ಎಂದು ರೈತರು ತಿಳಿಸಿದ್ದಾರೆ.
ಕಳೆದ ಐದಾರು ದಿನಗಳ ಹಿಂದೆ ಎತ್ತುಗಳಿಗೆ ಚಪ್ಪೆಬಾವು ಬಂದಿದೆ ಎಂದು ಶನಿವಾರ ಇಲ್ಲಿನ ಪಶು ಆಸ್ಪತ್ರೆಗೆ ಎತ್ತನ್ನು ಚಿಕಿತ್ಸೆಗೆ ಕರೆ ತಂದಿದ್ದ ಲಕ್ಷ್ಮೇಶ್ವರದ ರೈತ ನಾಗರಾಜ ಗೊಜಗೊಜಿ ಹೇಳಿದರು.
‘ಎತ್ತಿನ ಕಾಲುಗಳಿಗೆ ಬಾವು ಬಂದೇತ್ರೀ. ಹಿಂಗಾಗಿ ದವಾಖಾನಿಗೆ ಕರಕೊಂಡು ಬಂದೇನಿ’ ಎಂದು ಸಮೀಪದ ಹರದಗಟ್ಟಿ ಗ್ರಾಮದ ರಮೇಶ ಲಮಾಣಿ ತಿಳಿಸಿದರು.