ಗದಗ: ‘ಕರ್ತವ್ಯದ ಜೊತೆ ಸಮಾಜ ಸೇವೆಯಲ್ಲೂ ತೊಡಗಿಸಿಕೊಂಡಾಗ ಮಾತ್ರ ಸಾರ್ಥಕ ಭಾವ ಮೂಡುತ್ತದೆ’ ಎಂದು ಹವಾಮಾನ ಇಲಾಖೆಯ ಹಿರಿಯ ವಿಜ್ಞಾನಿ ನಟರಾಜ ಸವಡಿ ಹೇಳಿದರು.
ನಗರದ ಹವಾಮಾನ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿ ಈಚೆಗೆ ಸೇವಾ ನಿವೃತ್ತಿ ಹೊಂದಿದ ಅಂಗವಾಗಿ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘1987ರಿಂದ 2023ರವರೆಗೆ ಹವಾಮಾನ ಇಲಾಖೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿದ ಸಂತೃಪ್ತಿ ನನ್ನಲ್ಲಿದೆ. ಗುರುಗಳ ಮಾರ್ಗದರ್ಶನ, ಸಹೋದ್ಯೋಗಿಗಳ ಸಹಕಾರ, ಕುಟುಂಬದವರ ಪ್ರೋತ್ಸಾಹ, ಶಿಷ್ಯ ಬಳಗದ ಉತ್ಸಾಹ ಸೇವೆಯೊಂದಿಗೆ ಸಮಾಜಸೇವೆಯಲ್ಲಿ ತೊಡಗಿಸಿಕೊಳ್ಳಲು ಪ್ರೇರಣೆ ನೀಡಿತು. ನಿವೃತ್ತಿಯ ನಂತರ ನನ್ನ ಸಮಾಜಸೇವೆ ಹಿಂದಿಗಿಂತಲೂ ಹೆಚ್ಚು ವೇಗ ಪಡೆದುಕೊಳ್ಳಲಿದೆ’ ಎಂದು ಹೇಳಿದರು.
‘ನಟರಾಜ ಸವಡಿ ಅವರು ತಮ್ಮ ವೃತ್ತಿ ಜೀವನದಲ್ಲಿ ದಕ್ಷತೆ ಹಾಗೂ ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಿದ್ದಾರೆ. ಹವಾಮಾನ ಇಲಾಖೆಯ ನೌಕರರ ಸಂಘಟನೆಯಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿ ನೌಕರರ ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ. ಗದಗ ಯೂಥ್ ಅಸೋಸಿಯೇಷನ್ ಸಂಸ್ಥಾಪಕ ನಿರ್ದೇಶಕರಾಗಿ ತಮ್ಮ ಅನುಭವವನ್ನು ಸಂಘಟನೆಯ ಕಾರ್ಯಕರ್ತರಿಗೆ ಧಾರೆ ಎರೆದ ಪರಿಣಾಮವಾಗಿ ಈ ಸಂಸ್ಥೆಯಲ್ಲಿ ಒಬ್ಬರಿಗೆ ರಾಷ್ಟ್ರ ಪ್ರಶಸ್ತಿ, ಐವರಿಗೆ ರಾಜ್ಯ ಯುವ ಪ್ರಶಸ್ತಿ ಲಭಿಸಿದೆ’ ಎಂದು ಹವಾಮಾನ ಇಲಾಖೆಯ ವಿಜ್ಞಾನಿ ಡಾ. ರಾಜು ರೋಖಡೆ ಹೇಳಿದರು.
ಶಿಕ್ಷಣ ತಜ್ಞ ಟಿ.ವಿ. ಮಾಗಳದ ಮಾತನಾಡಿದರು. ಗೋವಿನಕೊಪ್ಪದ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರಕಾಶ ಪಾಟೀಲ, ನಾಗಪ್ಪ ಸವಡಿ, ವೀರಮ್ಮ ಸವಡಿ, ಜಯಶ್ರೀ ನಟರಾಜ ಸವಡಿ, ಪರಶುರಾಮ ಹಬೀಬ, ಆನಂದ ಗುಡಿಮನಿ, ರಾಜು ಮುಧೋಳ, ತೇಜೂ ನಟರಂಗ, ಜೀತೇಂದ್ರಕುಮಾರ ಸೈನಿ, ಹನುಮಂತ ಕಟ್ಟಿಮನಿ ಇದ್ದರು.