ಚಿಕ್ಕಮಗಳೂರು: ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶ ಸೋಮವಾರ ಪ್ರಕಟವಾಗಿದ್ದು, ಈ ಬಾರಿ ಜಿಲ್ಲೆ ಶೇ 72.47 ಫಲಿತಾಂಶ ದಾಖಲಿಸಿ, ರಾಜ್ಯದಲ್ಲಿ 26ಸ್ಥಾನ ಪಡೆದಿದೆ. ಕಳೆದ ಬಾರಿಗಿಂತ ಎಂಟು ಸ್ಥಾನ ಕುಸಿತ ಕಂಡಿದೆ.
ಕಳೆದ ಬಾರಿ ಶೇ 74.4 ಫಲಿತಾಂಶ ದಾಖಲಿಸಿ, 18ನೇ ಸ್ಥಾನ ಪಡೆದಿತ್ತು. ಒಟ್ಟು 11,744 ವಿದ್ಯಾರ್ಥಿಗಳ ಪೈಕಿ 8,511 ಮಂದಿ ಉತೀರ್ಣರಾಗಿದ್ದಾರೆ. 5,756 ಬಾಲಕರ ಪೈಕಿ 3,972 (ಶೇ 69) ಹಾಗೂ 5,988 ವಿದ್ಯಾರ್ಥಿನಿಯರ ಪೈಕಿ 4,740 (ಶೇ 79.15) ಮಂದಿ ತೇರ್ಗಡೆಯಾಗಿದ್ದಾರೆ.
ಜಿಲ್ಲೆಯ ಶೈಕ್ಷಣಿಕ ವಲಯವಾರು ಶೃಂಗೇರಿ– ಒಂದನೆ (ಶೇ 87.46), ಕೊಪ್ಪ– ಎರಡನೇ (ಶೇ 83.91), ಮೂಡಿಗೆರೆ – ಮೂರನೇ (ಶೇ 74.56), ಚಿಕ್ಕಮಗಳೂರು– ನಾಲ್ಕನೇ (ಶೇ 74.22), ಎನ್.ಆರ್.ಪುರ– ಐದನೇ (ಶೇ 72.84), ತರೀಕೆರೆ –ಆರನೇ (ಶೇ 71.35), ಕಡೂರು –ಏಳನೇ (ಶೇ 74.22) ಹಾಗೂ ಬೀರೂರು– ಎಂಟನೇ (ಶೇ 62.42) ಸ್ಥಾನ ಪಡೆದಿವೆ.
ನಗರದ ಸೇಂಟ್ ಮೇರೀಸ್ ಶಾಲೆಯ ವಿದ್ಯಾರ್ಥಿನಿ ಆರ್.ತನುಷಾ ಅವರು 625ಕ್ಕೆ 621 (ಶೇ 99.36) ಅಂಕ ಪಡೆದು ಸಾಧನೆ ಮೆರೆದಿದ್ದಾರೆ. ಕನ್ನಡದಲ್ಲಿ 125ಕ್ಕೆ 125, ಇಂಗ್ಲಿಷ್, ಹಿಂದಿ, ಗಣಿತ, ಸಮಾಜವಿಜ್ಞಾನ ವಿಷಯಗಳಲ್ಲಿ 100ಕ್ಕೆ 100 ಹಾಗೂ ವಿಜ್ಞಾನದಲ್ಲಿ 100ಕ್ಕೆ 96 ಅಂಕ ಪಡೆದಿದ್ದಾರೆ. ತನುಷಾ ಅವರು ಉಂಡೇದಾಸರಹಳ್ಳಿ ನಿವಾಸ ಖಾಸಗಿ ಸಂಸ್ಥೆ ಉದ್ಯೋಗಿ ವಿ.ರಾಜಶೇಖರ್ ಮತ್ತು ಸವಿತಾ ದಂಪತಿ ಪುತ್ರಿ.
ಪ್ರಕೃತಿ ಅವರು 618 (ಶೇ 98.88) ಅಂಕ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ. ಅವರು ಕನ್ನಡದಲ್ಲಿ 124, ಇಂಗ್ಲಿಷ್– 99, ಹಿಂದಿ –99, ಗಣಿತ 100, ವಿಜ್ಞಾನ–97, ಸಮಾಜ ವಿಜ್ಞಾನ–99 ಅಂಕ ಗಳಿಸಿದ್ದಾರೆ. ಪ್ರಕೃತಿ ಅವರು ನಗರದ ರಾಜೇಂದ್ರ ಮತ್ತು ಪದ್ಮಲತಾ ದಂಪತಿ ಪುತ್ರಿ.
ಸೇಂಟ್ ಮೇರಿಸ್ ಶಾಲೆಗೆ ಶೇ 100: ಸೇಂಟ್ ಮೇರಿಸ್ ಶಾಲೆಗೆ ಶೇ 100 ಫಲಿತಾಂಶ ಸಂದಿದೆ. ಆರ್.ತನುಷಾ ಅವರು 621 ಅಂಕ ಪಡೆದು ರಾಜ್ಯಕ್ಕೆ 5ನೇ ಸ್ಥಾನ ಪಡೆದಿದ್ದಾರೆ. 47 ಮಂದಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಆರ್.ಪ್ರಕೃತಿ– 618 (ಶೇ 98.88), ಹೇಮಶ್ರೀ– 614 (ಶೇ 98.24), ಬಿ.ಎ.ಸೋನಿಕಾ–609 (ಶೇ 97.44), ಎಸ್.ಆರ್.ಪ್ರೀತಂ– 601 (ಶೇ 96.16)ಅಂಕ ಗಳಿಸಿ ಶಾಲೆಗೆ ಕೀರ್ತಿ ಸಾಧನೆ ತಂದಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಜ್ಞಾನರಶ್ಮಿ ಆಂಗ್ಲ ಮಾಧ್ಯಮ ಶಾಲೆಗೆ ಶೇ 100: ಹಳೇಉಪ್ಪಳ್ಳಿಯ ಜ್ಞಾನರಶ್ಮಿ ಆಂಗ್ಲ ಮಾಧ್ಯಮ ಶಾಲೆಯು ಎಂಟನೇ ಬಾರಿಗೆ ಶೇ100 ಫಲಿತಾಂಶ ದಾಖಲಿಸಿದೆ. 28 ವಿದ್ಯಾರ್ಥಿಗಳಪೈಕಿ ಏಳು ಮಂದಿ ಅತ್ಯುನ್ನತ ಶ್ರೇಣಿ ಪಡೆದಿದ್ದಾರೆ.
ಶಾರದಮ್ಮ ಎಂ.ಜೆ.ಪಟ್ಟಾಭಿರಾಮಶೆಟ್ಟಿ ಪ್ರೌಢಶಾಲೆಗೆ ಶೇ 100: ಮಲ್ಲಂದೂರು ರಸ್ತೆಯ ಶಾರದಮ್ಮ ಎಂ.ಜೆ.ಪಟ್ಟಾಭಿರಾಮಶೆಟ್ಟಿ ಪ್ರೌಢಶಾಲೆಗೆ ಶೇ 100 ಫಲಿತಾಂಶ ಸಂದಿದೆ. 46 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ ಪಡೆದಿದ್ದಾರೆ.
ಜೆವಿಎಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಗೆ ಶೇ 96: ವಿಜಯಪುರ ಬಡಾವಣೆಯ ಜೆವಿಎಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯು ಶೇ 96 ಫಲಿತಾಂಶ ದಾಖಲಿಸಿದೆ. 51 ವಿದ್ಯಾರ್ಥಿಗಳ ಪೈಕಿ 14 ಮಂದಿ ಅತ್ಯುನ್ನತ ಶ್ರೇಣಿ ಪಡೆದಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಎಂಇಎಸ್ಎಸ್ಎಸ್ಆರ್ ಪ್ರಾಯೋಗಿಕ ಶಾಲೆ ಶೇ 87.37: ಜ್ಯೋತಿನಗರದ ಎಂಇಎಸ್ಎಸ್ಎಸ್ಆರ್ ಪ್ರಾಯೋಗಿಕ ಶಾಲೆಗೆ ಶೇ 87.37 ಫಲಿತಾಂಶ ದಾಖಲಿಸಿದೆ. ಶಾಲೆಯ ಸಿ.ಜೆ.ಅನುಶ್ರೀ 608(ಶೇ 97.28) ಪಡೆದು ಶಾಲೆಗೆ
ಕೀರ್ತಿ ತಂದಿದ್ದಾರೆ. 103 ವಿದ್ಯಾರ್ಥಿಗಳು ಪೈಕಿ 11 ಮಂದಿ ಅತ್ಯುನ್ನತ ಶ್ರೇಣಿ ಪಡೆದಿದ್ದಾರೆ.
ಶ್ರೀಮತಿ ಪರ್ವತವಧನ ಎಂ.ಎಲ್.ವಾಸುದೇವಮೂರ್ತಿ ಬಾಲಿಕಾ ಪ್ರೌಢಶಾಲೆಗೆ ಶೇ 71 ಫಲಿತಾಂಶ:
ರತ್ನಗಿರಿ ರಸ್ತೆಯ ಶ್ರೀಮತಿ ಪರ್ವತವಧನ ಎಂ.ಎಲ್.ವಾಸುದೇವಮೂರ್ತಿ ಬಾಲಿಕಾ ಪ್ರೌಢಶಾಲೆಗೆ ಶೇ 71 ಫಲಿತಾಂಶ ಸಂದಿದೆ. ಶಾಲೆಯ ಎಂಟು ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ ಪಡೆದಿದ್ದಾರೆ.
**
ಅಂದಿನ ಪಾಠ ಅಂದೇ ಅಭ್ಯಾಸ ಮಾಡುತ್ತಿದೆ.ಹಳೆಯ ಪ್ರಶ್ನೆಪತ್ರಿಕೆಗಳನ್ನು ಬಿಡಿಸಿದ್ದೆ. ದಿನಕ್ಕೆ 7 ಗಂಟೆ ಓದುತ್ತಿದ್ದೆ. ವಿಜ್ಞಾನಿಯಾಗುವ ಗುರಿ ಇದೆ
– ತನುಷಾ, ಸೇಂಟ್ ಮೇರಿಸ್ ಶಾಲೆ
ಪ್ರತಿದಿನ ನಾಲ್ಕೈದು ಗಂಟೆ ಓದುತ್ತಿದ್ದೆ. ತಯಾರಿ ನಿಟ್ಟಿನಲ್ಲಿ ಪೂರ್ವ ಸಿದ್ಧತಾ ಪರೀಕ್ಷೆಗಳ ಸಹಕಾರಿಯಾದವು. ಮುಂದೆ ವೈದ್ಯೆಯಾಗುವ ಕನಸು ಇದೆ
– ಪ್ರಕೃತಿ, ಸೇಂಟ್ ಮೇರಿಸ್ ಶಾಲೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.