ಮುಂಡರಗಿ: ‘ತಾಲ್ಲೂಕಿನ ವಿವಿಧ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಿ ಅವುಗಳಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವ ಕುರಿತಂತೆ ಸರ್ಕಾರ ತಕ್ಷಣ ಅಧಿಸೂಚನೆ ಹೊರಡಿಸಬೇಕು’ ಎಂದು ಒತ್ತಾಯಿಸಿ ತಾಲ್ಲೂಕಿನ ವಿವಿಧ ತಾಂಡಾಗಳ ಜನರು ಮಂಗಳವಾರ ತಹಶೀಲ್ದಾರ್ ಆಶಪ್ಪ ಪೂಜಾರಿ ಅವರಿಗೆ ಮನವಿ ಸಲ್ಲಿಸಿದರು.
ಬಂಜಾರ ಸಮುದಾಯದ ಯುವ ಮುಖಂಡ ಸುಭಾಸ ಗುಡಿಮನಿ ಮಾತನಾಡಿ, ತಾಲ್ಲೂಕಿನಲ್ಲಿ ಒಟ್ಟು 13 ತಾಂಡಾಗಳಿದ್ದು ಅವುಗಳಲ್ಲಿ ಈಗಾಗಲೇ ಬೀಡನಾಳ ಸಣ್ಣ ಮತ್ತು ದೊಡ್ಡತಾಂಡಾ, ಹಮ್ಮಿಗಿ ತಾಂಡಾ, ಶಿವಾಜಿನಗರ ಹಾಗೂ ವಿರುಪಾಪುರ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಲು ಸರ್ಕಾರ ಅಧಿಸೂಚನೆ ಹೊರಡಿಸಿದೆ ಎಂದರು.
ತಾಲ್ಲೂಕಿನಲ್ಲಿ ಇನ್ನುಳಿದ ಬಸಾಪುರತಾಂಡಾ, ಶೀರನಹಳ್ಳಿತಾಂಡಾ, ಕಪ್ಪತಗಿರಿತಾಂಡಾ, ಅತ್ತಿಕಟ್ಟಿತಾಂಡಾ, ದಿಂಡೂರತಾಂಡಾ, ಕಕ್ಕೂರ ತಾಂಡಾ, ಜಾಲವಾಡಗಿತಾಂಡಾ ಹಾಗೂ ಮುರುಡಿತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಲು ಸರ್ಕಾರ ತಕ್ಷಣ ಅಧಿಸೂಚನೆ ಹೊರಡಿಸಬೇಕು ಎಂದು ಒತ್ತಾಯಿಸಿದರು.
ಡಾ.ಮಿಟ್ಯಾ ನಾಯಕ ಮಾತನಾಡಿ, 2016ನೇ ಸಾಲಿನ ಗೆಜೆಟೆಡ್ ತಿದ್ದುಪಡಿಯ ಆದೇಶದಂತೆ ದಾಖಲೆ ರಹಿತ ಜನವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿ ಸಲು ಆದೇಶಿಸಲಾಗಿದೆ. ಕಂದಾಯ ಗ್ರಾಮಗಳನ್ನಾಗಿ ಆಯ್ಕೆ ಮಾಡುವುದಕ್ಕೆ ತಾಲ್ಲೂಕು ದಂಡಾಧಿಕಾರಿಗೆ ಮತ್ತು ಜಿಲ್ಲಾಧಿಕಾರಿಗೆ ಅಧಿಕಾರವಿರುತ್ತದೆ. ಆದ್ದರಿಂದ ಉಳಿದಿರುವ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿಸಬೇಕು ಎಂದು ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಫಕೀರಪ್ಪ ನಾಯಕ, ಡಾಕ್ರಪ್ಪ ನಾಯಕ, ರೂಪ್ಲಪ್ಪ ನಾಯಕ, ಫಕೀರಪ್ಪ ನಾಯಕ, ರಾಮಪ್ಪ ಸಕ್ರುನಾಯಕ, ಸಕ್ರಪ್ಪ ನಾಯಕ, ಹನುಮಪ್ಪ ನಾಯಕ, ಈರೇಶ ಲಮಾಣಿ, ಸುರೇಶ ಮಾಳಗಿಮನಿ, ಎಸ್.ಆರ್.ಪವಾರ, ನಾಗರಾಜ ಗುಡಿಮನಿ ಇತರರು ಇದ್ದರು.