ಮುಂಡರಗಿ: ಛೋಪ್ರಾ ಅಂಗಡಿಯಲ್ಲಿ ನಿತ್ಯ ಕನ್ನಡೋತ್ಸವ

ಮುಂಡರಗಿ: ಪಟ್ಟಣದ ಕಾರ್ಯ ನಿರ್ವಹಿಸುತ್ತಿರುವ ಬಹುತೇಕ ಕಚೇರಿಗಳಲ್ಲಿ, ಸಂಘ ಸಂಸ್ಥೆಗಳಲ್ಲಿ ಹಾಗೂ ಅಂಗಡಿ ಮುಂಗಟ್ಟುಗಳ ನಿತ್ಯದ ವ್ಯಾಪಾರ ವಹಿವಾಟುಗಳಲ್ಲಿ ಗ್ರಾಹಕರು ಮತ್ತು ವ್ಯಾಪಾರಸ್ಥರು ಕನ್ನಡ ಅಂಕಿ, ಸಂಖ್ಯೆಗಳ ಬದಲಾಗಿ ಇಂಗ್ಲಿಷ್ ಅಂಕಿ– ಸಂಖ್ಯೆಗಳನ್ನೇ ಬಳಸುತ್ತಿದ್ದಾರೆ. ಆದರೆ, ಕಳೆದ ಹಲವು ದಶಕಗಳಿಂದ ಪಟ್ಟಣದ ಎಪಿಎಂಸಿಯಲ್ಲಿ ವ್ಯಾಪಾರ ಮಾಡುತ್ತಿರುವ ರಾಜಸ್ಥಾನ ಮೂಲದ ಮಾರ್ವಾಡಿಗಳಾದ ಗೌತಮಚಂದ್ ಛೋಪ್ರಾ ಹಾಗೂ ಅವರ ಮಕ್ಕಳು ತಮ್ಮ ದೈನಂದಿನ ವ್ಯಾಪಾರ ವಹಿವಾಟುಗಳಲ್ಲಿ ನಿತ್ಯ ಕನ್ನಡದ ಅಂಕಿ– ಸಂಖ್ಯೆಗಳನ್ನು ಬಳಸಿ, ಕನ್ನಡದಲ್ಲೇ ವ್ಯವಹರಿಸುವ ಮೂಲಕ ಕನ್ನಡಾಭಿಮಾನವನ್ನು ಮೆರೆಯುತ್ತಿದ್ದಾರೆ. ಆ ಮೂಲಕ ಅವರು ಕನ್ನಡಿಗರಿಗೆ ಮಾದರಿಯಾಗಿದ್ದಾರೆ.
ಗೌತಮಚಂದ್ ಛೋಪ್ರಾ ಅವರ ಕುಟುಂಬವು ಹಲವು ದಶಕಗಳಿಂದ ಪಟ್ಟಣದ ಎಪಿಎಂಸಿಯಲ್ಲಿ ದಲ್ಲಾಳಿಯಾಗಿದ್ದು, ಜೊತೆಗೆ ಹಲವು ವರ್ಷಗಳ ಕಾಲ ಕಿರಾಣಿ ಅಂಗಡಿಯನ್ನು ನಿರ್ವಹಿಸಿದ್ದಾರೆ. ತಮ್ಮ ಬಳಿ ಬರುವ ಗ್ರಾಹಕರೊಂದಿಗೆ ನಿತ್ಯ ಅಚ್ಚ ಕನ್ನಡದಲ್ಲಿ ಮಾತನಾಡುವ ಅವರು ತಮ್ಮ ಅಂಗಡಿಯ ದೈನಂದಿನ ಎಲ್ಲ ಕಾಗದ ಪತ್ರಗಳಲ್ಲಿ ಈಗಲೂ ಕನ್ನಡದ ಅಂಕಿಗಳನ್ನೆ ಬಳಸುತ್ತಿದ್ದಾರೆ. ಜೊತೆಗೆ ಎಲ್ಲರೂ ಕನ್ನಡ ಅಂಕಿಗಳನ್ನು ಬಳಸುವಂತೆ ಪ್ರೆರೇಪಿಸುತ್ತಿದ್ದಾರೆ. ಛೋಪ್ರಾ ಕುಟುಂಬದ ಕನ್ನಡ ಪ್ರೀತಿಯನ್ನು ಮನಗಂಡ ಗದುಗಿನ ಲಿಂ. ಡಾ. ತೋಂಟದ ಸಿದ್ಧಲಿಂಗ ಸ್ವಾಮೀಜಿ, ಮುಂಡರಗಿಯ ಜಗದ್ಗುರು ಡಾ.ಅನ್ನದಾನೀಶ್ವರ ಸ್ವಾಮೀಜಿ, ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಅವರನ್ನು ಸನ್ಮಾನಿಸಿದ್ದಾರೆ. ಜಿಲ್ಲೆಯ ವಿವಿಧ ಸಂಘ ಸಂಸ್ಥೆಗಳು ಚೋಪ್ರಾ ಅವರ ಕನ್ನಡ ಸೇವೆಯನ್ನು ಕೊಂಡಾಡಿ ಅವರನ್ನು ಗೌರವಿಸಿವೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.