ತಪ್ಪು ಕಲ್ಪನೆ ದೂರವಿಟ್ಟು ಲಸಿಕೆ ಪಡೆಯಿರಿ

ಗದಗ: ‘ಕೋವಿಡ್ನಿಂದ ರಕ್ಷಣೆ ಪಡೆಯಲು ಲಸಿಕೆ ಒಂದೇ ಪರಿಹಾರವಾಗಿದ್ದು, ಎಲ್ಲರೂ ಲಸಿಕೆ ಹಾಕಿಸಿಕೊಳ್ಳಬೇಕು. ಲಸಿಕೆ ಬಗ್ಗೆ ಇರುವ ತಪ್ಪು ಕಲ್ಪನೆಗಳನ್ನು ದೂರ ಸರಿಸಿ, ಅದು ನಮ್ಮ ಜೀವ ರಕ್ಷಣೆಗೆ ಇರುವ ದೈವ ಮಾರ್ಗವೆಂದು ತಿಳಿಯಬೇಕು’ ಎಂದು ಕುಲಪತಿ ಪ್ರೊ. ವಿಷ್ಣುಕಾಂತ ಎಸ್. ಚಟಪಲ್ಲಿ ಹೇಳಿದರು.
ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಕೋಶ, ಆರ್ಡಿಪಿಆರ್, ಸಾರ್ವಜನಿಕ ಆಡಳಿತ ಹಾಗೂ ಸಾರ್ವಜನಿಕ ಆರೋಗ್ಯ ಅಧ್ಯಯನ ವಿಭಾಗ ಹಾಗೂ ಗ್ರಾಮ ಪಂಚಾಯ್ತಿ ಸಹಕಾರದೊಂದಿಗೆ ಗದಗ ಮತ್ತು ಮುಂಡರಗಿ ತಾಲ್ಲೂಕಿನ ಆಯ್ದ ಗ್ರಾಮಗಳಲ್ಲಿ ‘ಕೋವಿಡ್-19 ಲಸಿಕಾ ಜಾಗೃತಿ ಅಭಿಯಾನ’ ನಡೆಸಲು ಯೋಜನೆ ರೂಪಿಸಲಾಗಿದ್ದು, ಈ ಅಭಿಯಾನಕ್ಕೆ ಬುಧವಾರ ಹರ್ತಿ ಗ್ರಾಮ ಪಂಚಾಯ್ತಿಯಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.
‘ವಿದ್ಯಾಲಯವು ಇಂತಹ ಸಾಮಾಜಿಕ ಕಳಕಳಿ ಮತ್ತು ಗ್ರಾಮೀಣಾಭಿವೃದ್ಧಿ ಕಾರ್ಯಗಳಿಗೆ ಸದಾ ಸನ್ನದ್ಧವಾಗಿರುತ್ತದೆ. ಇದರ ಉಪಯೋಗ ಎಲ್ಲರಿಗೂ ದೊರೆಯುವಂತಾಗಲಿ ಎನ್ನುವುದೇ ನಮ್ಮ ಉದ್ದೇಶ’ ಎಂದು ಹೇಳಿದರು.
ಡಾ. ನಾಗವೇಣಿ ಅವರು ಕೊರೊನಾ ಮೂರನೇ ಅಲೆಯ ಕುರಿತು ಮಾಹಿತಿ ನೀಡಿದರು. ಡಾ. ನಮಿತಾ ಕೊರೊನಾ ತಡೆಗಟ್ಟುವಲ್ಲಿ ಪೌಷ್ಟಿಕ ಆಹಾರದ ಮಹತ್ವ ಕುರಿತು ತಿಳಿಸಿದರು. ತದನಂತರ ಗ್ರಾಮದ ಮುಖ್ಯ ಬೀದಿ ಹಾಗೂ ಮನೆಗಳಿಗೆ ತೆರಳಿ ಲಸಿಕೆಯ ಕುರಿತು ಅರಿವು ಮೂಡಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹರ್ತಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಸೋಮರಡ್ಡಿ ನಡುವೂರ ವಹಿಸಿದ್ದರು. ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಶಿವಲೀಲಾ ಅಂಗಡಿ, ವಿಶ್ವವಿದ್ಯಾಲಯದ ಉಪನ್ಯಾಸಕರಾದ ಡಾ. ಶ್ರೀಧರ್ ಹಾದಿಮನಿ, ಡಾ. ಸಂತೋಷ ಪಿ.ಕೆ., ಡಾ. ಕೃಪಾ, ಡಾ. ವೀರೇಶ್ ವಿಜಾಪುರ ಹಾಗೂ ಗ್ರಾಮ ಪಂಚಾಯಿತಿಯ ಸದಸ್ಯರು ಮತ್ತು ಆಶಾ ಕಾರ್ಯಕರ್ತೆಯರು ಎನ್ಎಸ್ಎಸ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಎನ್ಎಸ್ಎಸ್ ಸಂಯೋಜನಾಧಿಕಾರಿ ಪ್ರಶಾಂತ್ ಮೆಹರವಾಡೆ ವಂದಿಸಿದರು. ಉಪನ್ಯಾಸಕ ಪ್ರಕಾಶ್ ಮಾಚೇನಹಳ್ಳಿ ನಿರೂಪಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.