ಗಜೇಂದ್ರಗಡ: ತಾಲ್ಲೂಕಿನ ನೆಲ್ಲೂರು ಗ್ರಾಮದ ಮುಪ್ಪಿನಾಥೇಶ್ವರ ದೇವಸ್ಥಾನದ ಆವರಣದಲ್ಲಿ ಬುಧವಾರ ವಿಶೇಷ ಕಾರ್ಯಕ್ರಮ ನಡೆಯಿತು. ಇಲ್ಲಿ ನಡೆದ ಎನ್ಎಸ್ಎಸ್ ಶಿಬಿರದ ಸಮಾರೋಪ ಸಮಾರಂಭದಲ್ಲಿ, ಗ್ರಾಮದ ಯುವಜನರು ಜತೆಯಾಗಿ ವರದಕ್ಷಿಣೆ ತಗೊಳಲ್ಲ, ಕೇಳಿದ್ರೆ ಕೊಡೊಲ್ಲ ಎಂಬ ಪ್ರತಿಜ್ಞೆ ಮಾಡಿದರು.
ಗ್ರಾಮದ ಮುಖಂಡರು, ಕಾಲೇಜಿನ ಉಪನ್ಯಾಸಕರ ಎದುರು ಗ್ರಾಮದ ಯುವಕರು ವರದಕ್ಷಿಣೆ ಕೇಳುವುದಿಲ್ಲವೆಂದೂ, ಯುವತಿಯರು ವರದಕ್ಷಿಣೆ ಪಡೆಯುವವರನ್ನು ಮದುವೆಯಾಗುವುದಿಲ್ಲ ಎಂದೂ ಪ್ರತಿಜ್ಞೆ ಸ್ವೀಕರಿಸಿದರು.
ಗ್ರಾಮದಲ್ಲಿ ಪಟ್ಟಣದ ಭೂಮರೆಡ್ಡಿ ಕಾಲೇಜಿನ ಎನ್ಎಸ್ಎಸ್ ಶಿಬಿರ ನಡೆದಿತ್ತು. ಶಿಬಿರಾರ್ಥಿಗಳು ಗ್ರಾಮದಲ್ಲಿ ಸಂಚರಿಸಿ, ಮನೆ, ಮನೆಗೆ ತೆರಳಿ ವರದಕ್ಷಿಣೆ ಎಂಬ ಸಾಮಾಜಿಕ ಪಿಡುಗು ನಿವಾರಿಸಲು ಜಾಗೃತಿ ಮೂಡಿಸಿದ್ದರು. ಸಮಾರೋಪ ಸಮಾರಂಭದಲ್ಲಿ ಗ್ರಾಮಸ್ಥರು, 50 ಮಂದಿ ಶಿಬಿರಾರ್ಥಿಗಳೂ ಸೇರಿ 200ಕ್ಕೂ ಜನರು ‘ವರದಕ್ಷಿಣೆ ನೀಡಬಾರದು, ಪಡೆಯಬಾರದು’ ಎಂದು ಪ್ರತಿಜ್ಞೆ ಸ್ವೀಕರಿಸಿದರು. ಯೋಜನಾಧಿಕಾರಿ ಅರವಿಂದ ವಡ್ಡರ ಪ್ರತಿಜ್ಞೆ ವಿಧಿ ಬೋಧಿಸಿದರು.
‘ವರದಕ್ಷಿಣೆ ಕಿರುಕುಳ ಪ್ರಕರಣಗಳು ಪ್ರತಿನಿತ್ಯ ವರದಿಯಾಗುತ್ತಿವೆ. ಜನ ಜಾಗೃತಗೊಂಡು, ವಿಶೇಷವಾಗಿ ಯುವಜನರು ಈ ಸಾಮಾಜಿಕ ಅನಿಷ್ಟ ಕಿತ್ತೊಗೆಯಲು ಶ್ರಮಿಸಬೇಕು’ ಎಂದು ಭೂಮರೆಡ್ಡಿ ಕಾಲೇಜಿನ ಪ್ರಾಚಾರ್ಯ ಜೆ.ಜಿ.ಕುದರಿ ಹೇಳಿದರು.