ಗದಗ: ವಾರಾಂತ್ಯ ಕರ್ಫ್ಯೂಗೆ ಭಾನುವಾರವೂ ನಗರದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಅಗತ್ಯ ಸೇವೆ ಗಳನ್ನು ಹೊರತುಪಡಿಸಿ ವಾಣಿಜ್ಯ ಚಟುವಟಿಕೆಗಳು ಬಂದ್ ಆಗಿದ್ದವು.
ಕಿರಾಣಿ ಅಂಗಡಿ, ಔಷಧ ಅಂಗಡಿ, ಹೋಟೆಲ್, ಹಾಲು ಮಾರಾಟ ಕೇಂದ್ರ, ಹೂವು ಹಣ್ಣು, ತರಕಾರಿ ಮಾರುಕಟ್ಟೆಗಳು ಎಂದಿನಂತೆ ಕಾರ್ಯಾಚರಿಸಿದವು. ಮೀನು, ಮಾಂಸ ಮಾರುಕಟ್ಟೆಯಲ್ಲಿ ಜನಸಂದಣಿ ಜಾಸ್ತಿ ಇತ್ತು.
‘ಪ್ರಯಾಣಿಕರ ಸಂಖ್ಯೆಯನ್ನು ಆಧರಿಸಿ ವಿವಿಧ ರೂಟ್ಗಳಿಗೆ ಬಸ್ಗಳನ್ನು ಓಡಿಸಲಾಗಿದೆ. ಶನಿವಾರ 54ಬಸ್ಗಳು ಸಂಚರಿಸಿದ್ದವು. ಭಾನುವಾರದಂದು 75 ಬಸ್ಗಳನ್ನು ಓಡಿಸಲಾಗಿದೆ. ಹಾಲ್ಟಿಂಗ್ ಬಸ್ಗಳು ಆಯಾ ಸ್ಥಳಗಳಿಗೆ ಸಂಚರಿಸಿವೆ. ಎರಡು ದಿನಗಳಿಂದ ಸಾರಿಗೆ ಸಂಸ್ಥೆಗೆ ₹1 ಕೋಟಿ ನಷ್ಟ ಸಂಭವಿಸಿದೆ’ ಎಂದು ಗದಗ ವಿಭಾಗದ ಸಂಚಾರ ನಿಯಂತ್ರಣ ಅಧಿಕಾರಿ ಜಿ.ಐ.ಬಸವಂತಪುರ ತಿಳಿಸಿದರು.