ಹಾರೋಹಳ್ಳಿ(ಕನಕಪುರ): ಅಮ್ಮೆಂಬಳ ಸುಬ್ಬರಾವ್ ಪೈ ಅವರು ಬ್ಯಾಂಕ್ ಸ್ಥಾಪನೆಯೊಂದಿಗೆ ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಪ್ರಾರಂಭಿಸುವ ಮೂಲಕ ಲಕ್ಷಾಂತರ ಮಹಿಳೆಯರ ಅಭಿವೃದ್ಧಿಗೆ ಕಾರಣರಾಗಿದ್ದಾರೆ ಎಂದುಕೆನರಾ ಬ್ಯಾಂಕ್ ಪ್ರಧಾನ ಕಚೇರಿ ಗ್ರಾಮೀಣಾಭಿವೃದ್ಧಿ ಟ್ರಸ್ಟನ್ ಸಹಾಯಕ ಪ್ರಧಾನ ವ್ಯವಸ್ಥಾಪಕ ಬಿ.ಪಾರ್ಶ್ವನಾಥ್ ತಿಳಿಸಿದರು.
ತಾಲ್ಲೂಕಿನ ಹಾರೋಹಳ್ಳಿ ಕೆನರಾ ಬ್ಯಾಂಕ್ ಗ್ರಾಮೀಣ ಮಹಿಳೆಯರ ಸ್ವ ಉದ್ಯೋಗ ತರಬೇತಿ ಕೇಂದ್ರದಲ್ಲಿ ಮಹಿಳಾ ಹೊಲಿಗೆ ತರಬೇತಿ ಶಿಬಿರಾರ್ಥಿಗಳ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಹಣಕಾಸು ವ್ಯವಹಾರದೊಂದಿಗೆ ಸಮಾಜದ ಒಳಿತಿಗಾಗಿ ಅವರು ಚಿಂತಿಸಿ, ವಿವಿಧ ಕೌಶಲ ತರಬೇತಿ ಕೊಡುವ ಸಂಸ್ಥೆ ಹುಟ್ಟು ಹಾಕಿದ್ದಾರೆ ಎಂದು ಸ್ಮರಿಸಿದರು.
ಸಂಸ್ಥೆಯಲ್ಲಿ ಸ್ವಂತ ಉದ್ಯೋಗಕ್ಕೆ ನೆರವಾಗುವ ಸಾಕಷ್ಟು ಮಾಹಿತಿ ನೀಡಲಾಗುತ್ತದೆ. ತರಬೇತಿ ಮುಗಿಸಿದ ನಂತರ ಇತರಿಗೆ ಈ ಕುರಿತು ತಿಳಿಸಿ ಅವರಿಗೂ ತರಬೇತಿ ಹೊಂದುವಂತೆ ತಿಳಿಸಬೇಕು ಎಂದರು.
ಹಿರಿಯ ವ್ಯವಸ್ಥಾಪಕ ಶ್ರೀಕಾಂತ್ ಮಾತನಾಡಿ, ಮನುಷ್ಯನಿಗೆ ಬಟ್ಟೆ ಅತ್ಯಂತ ಮೂಲ ಅವಶ್ಯಕತೆ. ಹೊಲಿಗೆ ತರಬೇತಿ ಪಡೆದ ಎಲ್ಲರು ಉತ್ತಮ ಗ್ರಾಹಕ ಸೇವೆ ನೀಡಿ ಅವರ ವಿಶ್ವಾಸ ಗಳಿಸಿ ಎಂದರು.
ವ್ಯವಸ್ಥಾಪಕ ಕೃಷ್ಣಮೂರ್ತಿ ಮಾತನಾಡಿ, ತರಬೇತಿಯಲ್ಲಿ ಕಲಿತ ವಿಷಯ ಜೀವನದಲ್ಲಿ ಅಳವಡಿಸಿಕೊಳ್ಳಿ, ಉತ್ತಮ ಆದಾಯ ಗಳಿಸಿ ಆರ್ಥಿಕವಾಗಿ ಸಬಲರಾಗಿದೆ ಎಂದು ತಿಳಿಸಿದರು.
ತರಬೇತಿ ಸಂಸ್ಥೆಯ ನಿರ್ದೇಶಕಿ ಸುಮ.ಎನ್.ಗಾಂವಕರ್ ಮಾತನಾಡಿ,ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಪಕ್ಕದ ಹಳ್ಳಿಗಳಿಂದ ಸಂಸ್ಥೆಗೆ ತರಬೇತಿಗೆ ಬರಲು ಅಂಜುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಮಹಿಳಾ ಸಬಲೀಕರಣಕ್ಕೆ ಸಂಸ್ಥೆ ಶ್ರಮಿಸುತ್ತಿದೆ. ಇದಕ್ಕೆ ಎಲ್ಲರ ಸಹಕಾರ ಬೇಕು. ಗ್ರಾಮೀಣ ಹೆಣ್ಣು ಮಕ್ಕಳೂ ಹೊಸ ಉದ್ಯೋಗಗಳತ್ತ ಗಮನ ಹರಿಸಬೇಕು ಎಂದರು.
ಶಿಬಿರಾರ್ಥಿಗಳು ಅನುಭವಗಳನ್ನು ಹಂಚಿಕೊಂಡರು. ಅಲ್ಲದೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಉಪನ್ಯಾಸಕರಾದ ದೇವೀಂದ್ರಪ್ಪ, ನೇತ್ರಾವತಿ, ಗವಿರಾಜ್ ಉಪಸ್ಥಿತರಿದ್ದರು.