ವಿಜಯಪುರ: ಇಂಡಿ ತಾಲ್ಲೂಕು ತಡವಲಗಾ ಗ್ರಾಮದಲ್ಲಿ ಬುಧವಾರ ಕೃಷಿ ಹೊಂಡಕ್ಕೆ ಬಿದ್ದು ಬಾಲಕಿಯೊಬ್ಬಳು ಮೃತಪಟ್ಟಿದ್ದಾಳೆ.
ಪ್ರೀತಿ ಸುರೇಶ ಮುತ್ತಗಿ (8) ಮೃತಪಟ್ಟವಳು. ಈಕೆ ತಡವಲಗಾ ತೋಟದ ವಸ್ತಿ ಸರ್ಕಾರಿ ಶಾಲೆಯಲ್ಲಿ 2ನೇ ತರಗತಿಯಲ್ಲಿ ಓದುತ್ತಿದ್ದಳು. ದಸರಾ ರಜೆ ಅಂಗವಾಗಿ ಅಜ್ಜಿಯ ಮನೆಗೆ ಬಂದಿದ್ದಳು.
‘ಬೆಳಿಗ್ಗೆ 11 ಗಂಟೆ ಸುಮಾರಿಗೆ 3–4 ಮಕ್ಕಳು ಆಟವಾಡಲು ಕೃಷಿ ಹೊಂಡಕ್ಕೆ ಹೋಗಿವೆ. ಈ ವೇಳೆ ಪ್ರೀತಿ ಆಕಸ್ಮಿಕವಾಗಿ ಜಾರಿ ಹೊಂಡಕ್ಕೆ ಬಿದ್ದಿದ್ದಾಳೆ. ಹೊಂಡವು 15 ಅಡಿ ಆಳವಿದ್ದು, ನೀರಿನಿಂದ ಸಂಪೂರ್ಣ ಭರ್ತಿಯಾಗಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
‘ಮೃತ ಬಾಲಕಿ ತಾಯಿ ಜ್ಯೋತಿ ಅವರನ್ನು ಅದೇ ಗ್ರಾಮದ ಸುರೇಶ ಮುತ್ತಗಿ ಅವರಿಗೆ ಮದುವೆ ಮಾಡಿಕೊಡಲಾಗಿದೆ. ಇವರಿಗೆ ಮೂರು ಹೆಣ್ಣು ಮತ್ತು ಒಂದು ಗಂಡು ಮಗುವಿದ್ದು, ಮೃತ ಬಾಲಕಿ ಮೊದಲ ಮಗಳಾಗಿದ್ದಾಳೆ’ ಎಂಬುದು ಮೂಲಗಳ ವಿವರಣೆ.