ಕೋಡಿಹಳ್ಳಿ (ಕನಕಪುರ): ಅಂಗವಿಲಕರು ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸರ್ಕಾರ ವಿಶೇಷ ಅನುದಾನದಡಿ ಹಲವು ಸವಲತ್ತು ನೀಡಿದೆ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎನ್.ಎಸ್.ರಘು ಹೇಳಿದರು.
ತಾಲ್ಲೂಕಿನ ಕೋಡಿಹಳ್ಳಿ ಹೋಬಳಿ ಹೊಸದುರ್ಗ ಗ್ರಾಮ ಪಂಚಾಯಿತಿಯಲ್ಲಿ ಅಂಗವಿಕಲರ ಕಲ್ಯಾಣ ನಿಧಿಯಲ್ಲಿ ಮೀಸಲಿಟ್ಟ ಶೇಕಡ 5ರ ಅನುದಾನದಲ್ಲಿ ಅರ್ಹ ಫಲಾನುಭವಿಗಳಿಗೆ ಮೇಕೆ ವಿತರಿಸಿ ಮಾತನಾಡಿದರು.
ಪಂಚಾಯಿತಿಯಲ್ಲಿ 20 ಮಂದಿಗೆ ತಲಾ ಒಂದು ಮೇಕೆ ಕೊಡಲಾಗುತ್ತಿದೆ. ಅಂಗವಿಲಕರ ಕುಟುಂಬ ಈ ಮೂಲಕ ಆರ್ಥಿಕ ಸ್ವಾವಲಂಬನೆ ಸಾಧಿಸಬೇಕು ಎನ್ನುವುದು ಇದರ ಉದ್ದೇಶವಾಗಿದೆ ಎಂದು ತಿಳಿಸಿದರು.
ಪ್ರತಿ ವರ್ಷ ಪಂಚಾಯಿತಿಯಲ್ಲಿ ಬಳಸುವ ಅನುದಾನದಲ್ಲಿ ಅಂಗವಿಕಲರ ಕ್ಷೇಮಾಭಿವೃದ್ಧಿಗೆ ಶೇಕಡ 5ರಷ್ಟು ಹಣ ಮೀಸಲಿಡಲಾಗಿದೆ ಎಂದು ತಿಳಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವರಾಮ್, ಮಾಜಿ ಅಧ್ಯಕ್ಷರಾದ ಶಂಭುನಾಯ್ಕ್, ಪುಟ್ಟೇಗೌಡ, ಚಲುವರಾಜು, ಸದಸ್ಯರಾದ ಜಗದೀಶ್, ಲಕ್ಷ್ಮಣ್, ಮುಖಂಡ ಮಲ್ಲೇಶ್ ಇದ್ದರು.