ನವದೆಹಲಿ: ಮಾತನಾಡುವ ರೀತಿ ಬದಲಿಸಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸೂಚನೆ ನೀಡುವಂತೆ ಕಾಂಗ್ರೆಸ್ ಮುಖಂಡರು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಪತ್ರ ಬರೆದಿದ್ದಾರೆ.
ಪ್ರಧಾನಿಯಂತಹ ಉನ್ನತವಾದ ಸಾಂವಿಧಾನಿಕ ಹುದ್ದೆಯಲ್ಲಿರುವವರು ಆ ಹುದ್ದೆಯ ಘನತೆ, ಗೌರವಕ್ಕೆ ತಕ್ಕಂತೆ ನಡೆದುಕೊಳ್ಳಬೇಕು. ಆದರೆ, ಮೋದಿ ಭಯ ಹುಟ್ಟಿಸುವ ರೀತಿ ಮಾತನಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಮೇ 6ರಂದು ಹುಬ್ಬಳ್ಳಿಯಲ್ಲಿ ನಡೆದ ಚುನಾವಣಾ ಪ್ರಚಾರದ ವೇಳೆ ಮೋದಿ, ‘ನನ್ನ ತಂಟೆಗೆ ಬಂದರೆ ಹುಷಾರ್!’ ಎಂದು ಕಾಂಗ್ರೆಸ್ ನಾಯಕರಿಗೆ ಬೆದರಿಕೆ ಒಡ್ಡುವ ಧಾಟಿಯಲ್ಲಿ ಮಾತನಾಡಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ. ಮೋದಿ ಭಾಷಣದ ಯುಟ್ಯೂಬ್ ಲಿಂಕ್ ನೀಡಲಾಗಿದೆ.
‘ಕಾಂಗ್ರೆಸ್ ನಾಯಕರು ಹದ್ದುಮೀರಿ ವರ್ತಿಸಿದರೆ ಈ ಮೋದಿ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ. ಅದಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದ್ದರು.
ಸಂವಿಧಾನದತ್ತ ಅಧಿಕಾರವನ್ನು ಮೋದಿ ರಾಜಕೀಯ ಹಗೆತನ ತೀರಿಸಿಕೊಳ್ಳಲು ಬಳಸಿಕೊಳ್ಳುತ್ತಿ
ದ್ದಾರೆ. ಪ್ರಧಾನಿಯೊಬ್ಬರು ಆಡಬೇಕಾದ ಭಾಷೆ ಇದಲ್ಲ. ಅವರ ಹುದ್ದೆಗೆ ಇದು ಶೋಭೆ ತರುವುದಿಲ್ಲ ಎಂದು ಕಾಂಗ್ರೆಸ್ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಮಲ್ಲಿಕಾರ್ಜುನ ಖರ್ಗೆ, ಎ.ಕೆ. ಆಂಟನಿ, ಪಿ.ಚಿದಂಬರಂ ಸೇರಿದಂತೆ ಹಲವು ನಾಯಕರು ಈ ಪತ್ರಕ್ಕೆ ಸಹಿ ಹಾಕಿದ್ದಾರೆ.
***
ಪ್ರಧಾನಿ ಮೋದಿ ಅವರ ಇಂಥ ಗೊಡ್ಡು ಬೆದರಿಕೆಗೆ ಕಾಂಗ್ರೆಸ್ ಬಗ್ಗಲ್ಲ. ಇಂಥ ಎಷ್ಟೋ ಬೆದರಿಕೆಗಳನ್ನು ಪಕ್ಷ ಮೆಟ್ಟಿ ನಿಂತಿದೆ. – ಕಾಂಗ್ರೆಸ್