ವಿಜಯಪುರ: ಸ್ವಚ್ಛತೆ, ನೈರ್ಮಲ್ಯ, ಮಹಿಳೆ ಮತ್ತು ಮಕ್ಕಳ ರಕ್ಷಣೆ, ಹಸಿಕಸ ಮತ್ತು ಒಣಕಸ ಬೇರ್ಪಡಿಸುವಿಕೆ, ಹೆಣ್ಣು ಮಕ್ಕಳ ಕಡ್ಡಾಯ ಶಿಕ್ಷಣ ಎಂಬ ವಿವಿಧ ಕಾರ್ಯಕ್ರಮಗಳ ಜಾಗೃತಿ ಮೂಡಿಸುವ ಕಲಾ ತಂಡದ ವಾಹನಕ್ಕೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿಕಾಸ್ ಕಿಶೋರ್ ಸುರಳಕರ್ ಶುಕ್ರವಾರ ಚಾಲನೆ ನೀಡಿದರು.
ಈ ಜಾಗೃತಿ ವಾಹನದೊಂದಿಗೆ ಕಲಾತಂಡವು ‘ಸ್ವಚ್ಛಮೇವ ಜಯತೆ’, ‘ಸ್ವಚ್ಛತೆಯ ಜವಾಬ್ದಾರಿ ನಿಮ್ಮದು; ಬನ್ನಿ ನಮ್ಮೊಂದಿಗೆ ಕೈ ಜೋಡಿಸಿ’, ‘ಸ್ವಚ್ಛತೆಯಲ್ಲಿ ಕರ್ನಾಟಕಕ್ಕೆ ಸಿಗಲಿ ಅಗ್ರಸ್ಥಾನ’, ‘ಜಲಾಮೃತ; ಪ್ರತಿ ಹನಿಯನ್ನು ರಕ್ಷಿಸಿ’ ಎಂಬ ಸಂದೇಶ ಫಲಕಗಳನ್ನು ಅಳವಡಿಸಿಕೊಂಡು ಜಿಲ್ಲೆಯ 80 ಹಳ್ಳಿಗಳಲ್ಲಿ ಜಾಗೃತಿ ಮೂಡಿಸಲಿದೆ.
ಈ ವಾಹವು 40 ದಿನ ವಿವಿಧ ಯೋಜನೆ ಕುರಿತು ಜಾಗೃತಿ ಮೂಡಿಸಿ ಮಾಹಿತಿ ಒದಗಿಸಲಿದ್ದು, 5 ಕಲಾವಿದರನ್ನು ಒಳಗೊಂಡ ಕಲಾ ತಂಡವು ಈ ವಾಹನದೊಂದಿಗೆ ತೆರಳಿದೆ.
ವಿಜಯ ಆಲಗೂರ, ರಾಜು ಚವ್ಹಾಣ, ವಿಶ್ವನಾಥ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಸಿ.ಬಿ.ಕುಂಬಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಮಹೇಂದ್ರ ಕಾಪ್ಸೆ, ಮಕ್ಕಳ ರಕ್ಷಣಾಧಿಕಾರಿ ನಿರ್ಮಲ ಸುರಪುರ ಇದ್ದರು.