ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಲಸ ಕೊಡಿಸುವುದಾಗಿ ₹2.50 ಲಕ್ಷ ವಂಚನೆ

Last Updated 30 ನವೆಂಬರ್ 2022, 4:06 IST
ಅಕ್ಷರ ಗಾತ್ರ

ಹಾಸನ: ಕೆಲಸ ಕೊಡಿಸುವುದಾಗಿ ಫೋನ್‌ಪೇ ಮೂಲಕ ಹಣ ಪಡೆದು ವಂಚನೆ ಮಾಡಿರುವ ಪ್ರಕರಣ ಸೆನ್‌ ಠಾಣೆಯಲ್ಲಿ ದಾಖಲಾಗಿದೆ.

ಇಲ್ಲಿನ ಶಾಂತಿನಗರದ ಕಿರಣ್ ಕುಮಾರ್ ವಿವಿಧ ಕಂಪನಿಗಳಲ್ಲಿ ಕೆಲಸಕ್ಕಾಗಿ ಬಯೋಡಾಟ ಭರ್ತಿ ಮಾಡಿ ಹಾಕಿದ್ದರು. ಅಪರಿಚಿತ ವ್ಯಕ್ತಿ ಕರೆ ಮಾಡಿ, ಕೆಲಸ ಕೊಡಿಸುವುದಾಗಿ ಹೇಳಿದ್ದ. ಅದರಂತೆ ವಿವಿಧ ಶುಲ್ಕಗಳನ್ನು ಪಾವತಿಸುವಂತೆ ತಿಳಿಸಿದ್ದು, ಫೋನ್‌ ಪೇ ಮೂಲಕ ಹಣ ಕಳುಹಿಸುವಂತೆ ಹೇಳಿದ್ದ.

ಅದರಂತೆ ಕಿರಣ್‌ಕುಮಾರ್ ಹಂತ ಹಂತವಾಗಿ ಒಟ್ಟು ₹ 2.50 ಲಕ್ಷ ಹಾಕಿದ್ದಾರೆ. ನಂತರ ಕೆಲಸವನ್ನು ಕೊಡಿಸದೇ ವಂಚಿಸಿದ್ದು, ಈ ಬಗ್ಗೆ ಕಿರಣ್ ಕುಮಾರ್ ಸೆನ್‌ ಠಾಣೆಗೆ ದೂರು ನೀಡಿದ್ದಾರೆ.

ಚಿನ್ನಾಭರಣ ಕಳವು

ನಗರದ ಬಿಟ್ಟಗೌಡನಹಳ್ಳಿಯ ಮನೆಯ ಹಿಂಬಾಗಿಲಿನ ಬೀಗವನ್ನು ಒಡೆದು, ಚಿನ್ನಾಭರಣ, ನಗದು ಕಳವು ಮಾಡಲಾಗಿದೆ.

ಮೋಹನ್‍ಕುಮಾರ್ ಅವರು ನ.26 ರಂದು ಮನೆಗೆ ಬೀಗ ಹಾಕಿಕೊಂಡು ತಿಪಟೂರಿಗೆ ಹೋಗಿದ್ದರು. ನ.28 ರಂದು ಮಧ್ಯಾಹ್ನ ಮನೆಗೆ ಬಂದು ನೋಡಿದಾಗ ಕಳ್ಳತನ ನಡೆದಿರುವುದು ಗೊತ್ತಾಗಿದೆ. ಮನೆಯ ಹಿಂಭಾಗದ ಬಾಗಿಲನ್ನು ಒಡೆದ ಕಳ್ಳರು, 40 ಗ್ರಾಂ ಚಿನ್ನದ ಕರಿಮಣಿಸರ, 40 ಗ್ರಾಂ ಮಾಂಗಲ್ಯ ಸರ, 30 ಗ್ರಾಂ ಚಿನ್ನದ ಓಲೆಗಳು, 10 ಗ್ರಾಂ ಶಾರ್ಟ್ ಚೈನ್, 6 ಗ್ರಾಂ ಉಂಗುರ, 5 ಗ್ರಾಂ ಉಂಗುರ, 3 ಗ್ರಾಂ ಕಿವಿಯ ಓಲೆ ಸೇರಿದಂತೆ ಒಟ್ಟು ₹ 2.68ಲಕ್ಷ ಮೌಲ್ಯದ 134 ಗ್ರಾಂ ಚಿನ್ನಾಭರಣ, 30ಗ್ರಾಂ ತೂಕದ ಬೆಳ್ಳಿಯ ಕಾಲುಚೈನ್, ₹ 4,800 ನಗದು ಕಳವು ಮಾಡಿದ್ದಾರೆ. ಈ ಕುರಿತು ಹಾಸನ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೈಕ್‌ ಕಳವು

ಚನ್ನರಾಯಪಟ್ಟಣ: ತಾಲ್ಲೂಕಿನ ದಂಡಿಗನಹಳ್ಳಿ ಹೋಬಳಿಯ ಆನೆಕೆರೆ ಗ್ರಾಮದ ಮನೆಯ ಮುಂದೆ ನಿಲ್ಲಿಸಿದ್ದ ಬೈಕ್‌ ಅನ್ನು ಕಳವು ಮಾಡಲಾಗಿದೆ.

ರಾಮಕೃಷ್ಣ ಅವರು ತಮ್ಮ ಬೈಕ್ ಅನ್ನು ಮನೆ ಎದುರು ನಿಲ್ಲಿಸಿದ್ದು, ರಾತ್ರಿ ಸಮಯದಲ್ಲಿ ಕಳವು ಮಾಡಲಾಗಿದೆ. ಚನ್ನರಾಯಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಕೂಟಿ ಕಳವು

ಹಾಸನ: ಇಲ್ಲಿನ ರಿಂಗ್‌ ರಸ್ತೆಯ ಉದ್ಭವ ಗಣಪತಿ ಸರ್ಕಲ್‌ನಲ್ಲಿ ನಿಲ್ಲಿಸಿದ್ದ ಸ್ಕೂಟಿಯನ್ನು ಕಳವು ಮಾಡಲಾಗಿದೆ.

ಇಲ್ಲಿನ ಕುವೆಂಪು ನಗರದ ಮಂಜೇಗೌಡ ಅವರು ನ.26 ರಂದು ರಾತ್ರಿ ಸ್ಕೂಟಿಯನ್ನು ನಿಲ್ಲಿಸಿ, ಸ್ನೇಹಿತರೊಡನೆ ಮಾತನಾಡಲು ತೆರಳಿದ್ದರು. ವಾಪಸ್‌ ಬಂದು ನೋಡಿದಾಗ ಕಳವು ಮಾಡಿರುವುದು ಗೊತ್ತಾಗಿದೆ. ಇಲ್ಲಿನ ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೆಕ್ಲೆಸ್ ಕಳವು

ಹಾಸನ: ನಗರದ ಕಲ್ಯಾಣ ಮಂಟಪದಲ್ಲಿ ವಧುವಿನ 60 ಗ್ರಾಂ ಚಿನ್ನದ ಲಾಂಗ್‌ ನೆಕ್ಲೇಸ್‌ ಕಳವಾಗಿದೆ.

ತಾಲ್ಲೂಕಿನ ಶಾಂತಿಗ್ರಾಮದ ಮೋಹನ್ ಅವರು ತಮ್ಮ ಮಗಳ ಮದುವೆಯವನ್ನು ಕಲ್ಯಾಣ ಮಂಟಪದಲ್ಲಿ ಇಟ್ಟುಕೊಂಡಿದ್ದರು. ವಧುವಿನ ಕೊಠಡಿಯಲ್ಲಿದ್ದ ಚಿನ್ನದ ನೆಕ್ಲೆಸ್ ಕಳವು ಮಾಡಲಾಗಿದೆ. ಇದರ ಮೌಲ್ಯ ₹ 3 ಲಕ್ಷ ಎಂದು ಅಂದಾಜಿಸಲಾಗಿದೆ. ಇಲ್ಲಿನ ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT