ಬೇಲೂರು: ತಾಲ್ಲೂಕಿನ ಅರೇಹಳ್ಳಿ ಹೋಬಳಿಯ ಬ್ಯಾದನೆ ಗ್ರಾಮದ ಕೃಷ್ಣೇಗೌಡ ಎಂಬುವರು ಭಾನುವಾರ ಕಾಡಾನೆ ದಾಳಿಯಿಂದ ಪಾರಾಗಿದ್ದಾರೆ.
ಕೃಷ್ಣೇಗೌಡ ಬೆಳಿಗ್ಗೆ ಕಾಫಿ ತೋಟಕ್ಕೆ ನೀರು ಹಾಯಿಸಲು ಪೈಪ್ಗಳನ್ನು ತೆಗೆದುಕೊಂಡು ಹೋಗುತ್ತಿದ್ದಾಗ ಒಂಟಿ ಸಲಗ ದಾಳಿ ನಡೆಸಿದೆ. ಈ ವೇಳೆ ಕಿರು ಸೇತುವೆಯ ಪೈಪ್ನೊಳಗೆ ನುಗ್ಗಿದ್ದಾರೆ. ಪೈಪ್ನೊಳಗೂ ಆನೆ ಸೊಂಡಿಲು ಹಾಕಿದೆ. ಇದನ್ನು ಗಮನಿಸಿದ ಕೃಷ್ಣೇಗೌಡ ಮತ್ತೊಂದು ಬದಿಗೆ ಹೋಗಿದ್ದಾರೆ. ಆನೆ ಕೆಲ ಸಮಯ ಮೋರಿ ಸಮೀಪವೇ ಅತ್ತಿಂದಿತ್ತ ಓಡಾಡಿ, ಪೈಪ್ಗಳನ್ನು ತುಳಿದು, ಪಂಪ್ಸೆಟ್ ಹಾಳು ಮಾಡಿ ತೆರಳಿದೆ.
ಅಣ್ಣಮಲೈ ಎಸ್ಟೇಟ್ ಮಾಲೀಕರಾದ ರಾಜಮಣಿ ಮಾತನಾಡಿ, ‘ಆನೆಗಳ ಕಾಟ ಹೆಚ್ಚಾಗಿದ್ದು, ಆತಂಕಗೊಂಡಿದ್ದೇವೆ. ತೋಟದ ಕಾರ್ಮಿಕರು ಕೆಲಸಕ್ಕೆ ಬರುತ್ತಿಲ್ಲ. ಅರಣ್ಯ ಇಲಾಖೆ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕು’ ಎಂದು ಆಗ್ರಹಿಸಿದರು.