ಹಾಸನ: ‘ಜಿಲ್ಲೆಯ ರಾಜಕೀಯದಲ್ಲಿ ಹಲವು ಆಶ್ಚರ್ಯಕರ ಘಟನೆಗಳು ನಡೆಯಲಿವೆ. ಕಾದು ನೋಡಿ’ ಎಂದು ಶಾಸಕ ಪ್ರೀತಂ ಗೌಡ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮುಂದಿನ ದಿನಗಳಲ್ಲಿ ಹಲವು ಬದಲಾವಣೆಗಳು ನಡೆಯಲಿವೆ. ಯಾರ್ಯಾರು ಯಾವ ಯಾವ ಪಕ್ಷಕ್ಕೆ ಸೇರಿಕೊಳ್ಳುತ್ತಾರೆ ಎನ್ನುವುದು ಎಲ್ಲರಿಗೂ ಗೊತ್ತಾಗಲಿದೆ. ಎಚ್.ಡಿ.ರೇವಣ್ಣ ಅವರ ಪತ್ನಿ ಭವಾನಿ ಹಾಸನದಲ್ಲಿ ಸ್ಪರ್ಧಿಸುವಂತಿದ್ದರೆ ಸ್ಪರ್ಧಿಸಲಿ’ ಎಂದರು.
‘ಹಾಸನದಿಂದ ಯಾರು ಸ್ಪರ್ಧಿಸಬೇಕೆಂದು ಶಕ್ತಿದೇವತೆ ಹಾಸನಾಂಬೆ ಮತ್ತು ಪುರದಮ್ಮನ ಬಳಿ ಪ್ರಾರ್ಥಿಸಿದ್ದೇನೆ. ಜೆಡಿಎಸ್ನ ಹಲವು ಶಾಸಕರು ಪಕ್ಷ ಬಿಡಲಿದ್ದಾರೆ ಎನ್ನುವುದರ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ. ಅವರ ಮನೆಯ ಸಮಸ್ಯೆಗಳನ್ನು ಅವರೇ ಪರಿಹರಿಸಿಕೊಳ್ಳಬೇಕಲ್ಲವೇ’ ಎಂದು ಪ್ರಶ್ನಿಸಿದರು.
‘ನಮ್ಮ ಪಕ್ಷ ಸೇರಿಕೊಳ್ಳಿ ಎಂದು ನಾವು ಯಾರಿಗೂ ಆಹ್ವಾನ ನೀಡುತ್ತಿಲ್ಲ, ಬಲವಂತವೂ ಮಾಡುತ್ತಿಲ್ಲ. ಹಾಸನದಿಂದ ಸ್ಪರ್ಧಿಸುವಂತೆ ನಾನೇ ರೇವಣ್ಣ ಮತ್ತು ಭವಾನಿ ಅವರಿಗೆ ಆಹ್ವಾನ ನೀಡುತ್ತೇನೆ. ನಾನೇನೋ ಸಿದ್ಧನಿದ್ದೇನೆ. ತಯಾರಾಗಬೇಕಾದವರು ಅವರು’ ಎಂದರು.
‘ಹಾಸನ ಕ್ಷೇತ್ರದಲ್ಲಿ ನಾನು ಹಲವಾರು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ನನ್ನ ಕೆಲಸದಿಂದ ಜನರಿಗೆ ತೃಪ್ತಿಯಾಗಿದ್ದರೆ ಜನರು ನನಗೆ ಮತ ನೀಡುತ್ತಾರೆ. ರೇವಣ್ಣ ಅವರ ಕೆಲಸ ಜನರಿಗೆ ತೃಪ್ತಿಯಾಗಿದ್ದರೆ, ಅವರಿಗೇ ಜನರು ಮತ ನೀಡಲಿ’ ಎಂದು ಹೇಳಿದರು.