ಹಾಸನ: ವಿರೋಧದ ನಡುವೆಯೂ ಪ್ರೀತಿಸಿದ ಯುವಕನನ್ನು ಮಗಳು ಮದುವೆಯಾದಳು ಎಂಬ ಕಾರಣಕ್ಕೆ ₹ 5 ಲಕ್ಷ ಸುಪಾರಿ ನೀಡಿ ಅಳಿಯನ ಹತ್ಯೆ ಮಾಡಿಸಿರುವ ಪ್ರಕರಣವನ್ನು ಭೇದಿಸಿರುವ ಹೊಳೆನರಸೀಪುರ ನಗರ ಠಾಣೆ ಪೊಲೀಸರು, ಈ ಸಂಬಂಧ ಆರು ಮಂದಿಯನ್ನು ಬಂಧಿಸಿದ್ದಾರೆ.
ಮಂಡ್ಯ ಜಿಲ್ಲೆಯ ಕೊತ್ತತ್ತಿ ಹೋಬಳಿಯ ಸಿದ್ದಯ್ಯನಕೊಪ್ಪಲು ಗ್ರಾಮದ ಮಂಜು ಹತ್ಯೆಯಾದ ಯುವಕ. ಕೊಲೆಗೆ ಸುಪಾರಿ ನೀಡಿದ ಸಿದ್ದಯ್ಯನಕೊಪ್ಪಲು ಗ್ರಾಮದ ದೇವರಾಜು, ಸಂಜಯ್, ಯಲಿಯೂರು ಸರ್ಕಲ್ನ ಯೋಗೇಶ್, ಕಾಳೇನಹಳ್ಳಿ ಗ್ರಾಮದ ರೌಡಿ ಶೀಟರ್ ಮಂಜು, ಹಿಂಡುವಾಳು ಗ್ರಾಮದ ಚೆಲುವ, ಮಾಯಣ್ಣನಕೊಪ್ಪಲು ಗ್ರಾಮದ ನಂದನ್ ಎಂಬುವರನ್ನು ಬಂಧಿಸಲಾಗಿದೆ. ಕೃತ್ಯಕ್ಕೆ ಬಳಸಿದ ಚಾಕು, ಮುಂಗಡ ಹಣ ₹ 1,10 ಲಕ್ಷ, ಕಾರು ಮತ್ತು ಬೈಕ್ ವಶಪಡಿಸಿಕೊಳ್ಳಲಾಗಿದೆ.
ಸಿದ್ದಯ್ಯ ಕೊಪ್ಪಲು ಗ್ರಾಮದ ಹಾಲಿನ ಡೇರಿಯಲ್ಲಿ ಕಾರ್ಯದರ್ಶಿಯಾಗಿರುವ ದೇವರಾಜು ಅವರ ಮಗಳಿಗೆ ಮಂಡ್ಯದ ರುದ್ರಾಕ್ಷಿಪುರದ ಕಿರಣ್ ಎಂಬಾತನ ಜತೆ ಮದುವೆ ನಿಶ್ಚಯವಾಗಿತ್ತು. ಆದರೆ, ಮಗಳು ತಾನು ಪ್ರೀತಿಸುತ್ತಿದ್ದ ಅದೇ ಗ್ರಾಮದ ಮಂಜು ಎಂಬಾತನ ಜತೆ ಓಡಿ ಹೋಗಿ 45 ದಿನಗಳ ಹಿಂದೆ ಮದುವೆಯಾಗಿದ್ದಳು. ದಂಪತಿ ಮಂಡ್ಯ ನಗರದಲ್ಲಿ ವಾಸವಿದ್ದರು. ಮಂಜು ದೂರದ ಸಂಬಂಧಿ, ವರಸೆಯಲ್ಲಿ ಅಣ್ಣ–ತಂಗಿಯಾಗಬೇಕು ಎನ್ನಲಾಗಿದೆ. ಈ ಬಗ್ಗೆ ಗ್ರಾಮದಲ್ಲಿ ಅಣ್ಣ, ತಂಗಿಯರೇ ವಿವಾಹವಾಗಿದ್ದಾರೆಂದು ಜನರು ಮಾತನಾಡಿಕೊಳ್ಳುತ್ತಿದ್ದರು. ಇದರಿಂದ ದೇವರಾಜುಗೆ ಅವಮಾನವಾಗಿತ್ತು. ಮಂಜುಗೆ ಬುದ್ದಿ ಕಲಿಸುವ ಉದ್ದೇಶದಿಂದ ಕೊಲೆಗೆ ಮಾಡಿಸಲು ನಿರ್ಧರಿಸಿದ ಎಂದು ಪೊಲೀಸ್ ವರಿಷ್ಠಾಧಿಕಾರಿ ರಾಮ್ ನಿವಾಸ್ ಸೆಪಟ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ದೇವರಾಜು ತನ್ನ ಅಣ್ಣ ನಿಂಗೇಗೌಡ ಮಗ ಸಂಜು ಜತೆ ಸೇರಿ ಮಂಜು ಕೊಲೆಗೆ ಯೋಗೇಶ್, ಮಂಜು, ಚೆಲುವ, ನಂದನ್ ಗೆ ಎಂಬುವರಿಗೆ ₹ 5 ಲಕ್ಷ ಸುಪಾರಿ ನೀಡಿದ. ಮುಂಗಡವಾಗಿ ₹ 1.10 ಲಕ್ಷ ಸಹ ನೀಡಲಾಗಿತ್ತು. ಆರೋಪಿಗಳು ನ.9ರಂದು ಮಧ್ಯಾಹ್ನ ಮಂಜುವನ್ನು ಅಪಹರಿಸಿಕೊಂಡು ಕಾರಿನಲ್ಲಿ ಯಲಿಯೂರು, ಶ್ರೀರಂಗಪಟ್ಟಣ, ಪಾಲಹಳ್ಳಿ, ಪಂಪ್ ಹೌಸ್, ಮೈಸೂರು, ಬಿಳಿಕೆರೆ, ಲಕ್ಷ್ಮಣ ತೀರ್ಥ ನದಿ, ನಂತರ ಕೆ.ಆರ್.ನಗರದ ಕಾವೇರಿ ಹೊಳೆ ಹತ್ತಿರ ಕೊಲೆ ಮಾಡಲು ಪ್ರಯತ್ನಿಸಿ ವಿಫಲವಾಗಿದ್ದರು ಎಂದು ಸೆಪಟ್ ವಿವರಿಸಿದರು.
ಅಂತಿಮವಾಗಿ ಹೊಳೆನರಸೀಪುರದ ಸ್ಮಶಾನದ ಹತ್ತಿರ ಹೇಮಾವತಿ ನದಿ ಬಳಿ ಚಾಕುವಿನಿಂದ ಮಂಜುವಿನ ಕತ್ತು ಕೊಯ್ದು ಕೊಲೆ ಮಾಡಿ, ಬೆನ್ನಿಗೆ ಹಗ್ಗದಿಂದ ಕಲ್ಲು ಕಟ್ಟಿ ನದಿಯಲ್ಲಿ ಮುಳುಗಿಸಿ ಪರಾರಿಯಾಗಿದ್ದರು. ಕೃತ್ಯಕ್ಕೆ ಬಳಸಿದ್ದ ಬಟನ್ ಚಾಕುವನ್ನು ಫ್ಲಿಪ್ ಕಾರ್ಟ್ನಿಂದ ಆನೈಲೈನ್ ಮೂಲಕ ನಂದನ್ ತರಿಸಿಕೊಂಡಿದ್ದ ಎಂದು ಹೇಳಿದರು.
ನ. 14ರಂದು ಹೊಳೆನರಸೀಪುರ ಸ್ಮಶಾನದ ಮುಂಭಾಗ ಹೇಮಾವತಿ ನದಿ ನೀರಿನಲ್ಲಿ ಅಪರಿಚಿತ ಯುವಕನ ಶವ ಪತ್ತೆಯಾಗಿತ್ತು. ಬಲಗೈಯಲ್ಲಿ ಇಂಗ್ಲಿಷ್ನಲ್ಲಿ ‘ಅಚ್ಚು’ ಹಾಗೂ ಎಡಗೈನಲ್ಲಿ ಕನ್ನಡದಲ್ಲಿ ‘ಅಂಬಿ’ ಎಂಬ ಹಚ್ಚೆ ಗುರುತು ಇತ್ತು. ಪ್ರಕರಣ ಬೆನ್ನತ್ತಿದಾಗ ಕೊಲೆ ಎಂಬುದು ಗೊತ್ತಾಯಿತು. ಆರೋಪಿಗಳು ವಿಚಾರಣೆ ವೇಳೆ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ ಎಂದರು.
ಆರೋಪಿಗಳ ಪತ್ತೆಗೆ ಶ್ರಮಿಸಿದ ಪೊಲೀಸ್ ಸಿಬ್ಬಂದಿಗೆ ಎಸ್ಪಿ ಬಹುಮಾನ ಘೋಷಣೆ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.