ಹಾಸನ: ‘ಗಣರಾಜ್ಯೋತ್ಸವದ ಪ್ರಯುಕ್ತ ಡಾ.ಬಿ.ಆರ್ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡದೇ ಜಿಲ್ಲಾಡಳಿತ ಅಪಮಾನ ಮಾಡಿದೆ’ ಎಂದು ಆರೋಪಿಸಿ ಜೈಭೀಮ್ಬ್ರಿಗೇಡ್ ಸಂಘಟನಾ ಸಮಿತಿ, ಭೀಮ್ ಆರ್ಮಿ, ಅಂಬೇಡ್ಕರ್ ಯುವಕ್ರಾಂತಿ ಸೇನೆ ಮುಖಂಡರು ಜಿಲ್ಲಾಧಿಕಾರಿ ಕಚೇರಿ ಆವರಣದ ಅಂಬೇಡ್ಕರ್ ಪ್ರತಿಮೆ ಬಳಿ ಧರಣಿ ನಡೆಸಿದರು.
‘ಭಾರತದಸಂವಿಧಾನ ಕರಡು ಸಮಿತಿ ಅಧ್ಯಕ್ಷ ಬಿ.ಆರ್. ಅಂಬೇಡ್ಕರ್ ಅವರಿಗೆ ಇಡೀ ವಿಶ್ವವೇ ಗೌರವನೀಡುತ್ತದೆ. ಆದರೆ, ಜಿಲ್ಲಾಡಳಿತ ಅಂಬೇಡ್ಕರ್ ಪ್ರತಿಮೆಯ ದೂಳು ಸಹ ತೆಗೆದಿಲ್ಲ’ ಎಂದುಸಮಿತಿಯ ಜಿಲ್ಲಾಧ್ಯಕ್ಷ ರಾಜೇಶ್ ಆರೋಪಿಸಿದರು.
’ನಗರದ ಎಲ್ಲಾ ಸರ್ಕಾರಿ ಕಚೇರಿಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಿದ್ದು, ಅಂಬೇಡ್ಕರ್ ಪ್ರತಿಮೆಗೆ ಮಾತ್ರ ದೀಪಾಲಂಕಾರ ಮಾಡಿಲ್ಲ. ಹೂವಿನ ಹಾರವನ್ನೂ ಹಾಕಿಲ್ಲ’ ಎಂದರು.
ಬಳಿಕ ಜಿಲ್ಲಾಧಿಕಾರಿ ಆರ್. ಗಿರೀಶ್ ಅವರು ಪ್ರತಿಭಟನಾ ಸ್ಥಳಕ್ಕೆ ಬಂದು ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಪ್ರತಿಭಟನೆ ಕೈಬಿಡಲಾಯಿತು. ಸಮಿತಿಯ ಚಂದ್ರಶೇಖರ್, ಉಪಾಧ್ಯಕ್ಷ ಪಾಪಣ್ಣ, ಸಹ ಕಾರ್ಯದರ್ಶಿ ಶಂಕರ್, ಭೀಮ್ ಆರ್ಮಿ ಜಿಲ್ಲಾಧ್ಯಕ್ಷ ಪ್ರದೀಪ್ಇದ್ದರು.