ನಗರದ ನಗರಸಭೆ ಸಭಾಂಗಣದಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆ ಪ್ರಕ್ರಿಯೆ ಶುಕ್ರವಾರ ಆರಂಭವಾಯಿತು. ಆದರೆ, ಜೆಡಿಎಸ್ ಸದಸ್ಯರು ಮತದಾನದಿಂದ ದೂರ ಉಳಿದರು. ಕೇವಲ 6 ಸದಸ್ಯರು ಹಾಜರಿದ್ದು, ಚುನಾವಣಾ ಪ್ರಕ್ರಿಯೆಗೆ ಕೋರಂ ಕೊರತೆ ಎದುರಾಯಿತು. ಚುನಾವಣಾ ಪ್ರಕ್ರಿಯೆಗೆ ಮೂರನೇ ಒಂದರಷ್ಟು ಸದಸ್ಯರ ಹಾಜರಾತಿ ಕಡ್ಡಾಯ. ಹೀಗಾಗಿ, ಚುನಾವಣಾಧಿಕಾರಿಯೂ ಆದ ಉಪವಿಭಾಗಾಧಿಕಾರಿ ಜಗದೀಶ್ ಅವರು 30 ನಿಮಿಷ ಕಾಲಾವಕಾಶ ನೀಡಿದರು. ಈ ಅವಧಿಯಲ್ಲಿ ಯಾವುದೇ ಹೊಸ ಸದಸ್ಯರ ಹಾಜರಾತಿ ಕಂಡುಬರಲಿಲ್ಲ. ಹೀಗಾಗಿ, ಚುನಾವಣೆಯನ್ನು ಮುಂದೂಡಿದರು.